Publish Date: Thu, 17 Feb 2022 (17:21 IST)
Updated Date: Thu, 17 Feb 2022 (18:28 IST)
ಪೀಣ್ಯ ಮೇಲ್ಸೇತುವೆ ಕಳಪೆ ಎಂದು ಸಾಬೀತಾಗಿರುವ ಹಿನ್ನಲೆಯಲ್ಲಿ ನಗರದಲ್ಲಿರುವ ಎಲ್ಲ ಫ್ಲೈಓವರ್ಗಳ ಮೌಲ್ಯಮಾಪನ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ದೀರ್ಘಾವ ಆಯುಷ್ಯ ಹೊಂದಿದೆ ಎನ್ನಲಾದ ಪೀಣ್ಯ ಮೇಲ್ಸೇತುವೆ ಕಾಮಗಾರಿ ಅವಗೂ ಮುನ್ನವೇ ಕಳಪೆ ಎಂದು ಸಾಬೀತಾಗಿರುವ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ನೂರಾರು ಮೇಲ್ಸೇತುವೆಗಳ ಮೌಲ್ಯಮಾಪನ ನಡೆಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಈ ವಿಷಯವನ್ನು ಅಧಿವೇಶನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಅವರು ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಪತ್ರ ಬರೆದಿದ್ದಾರೆ.
50 ವರ್ಷ ಬಾಳಿಕೆ ಬರಲಿದೆ ಎಂದು ಭಾವಿಸಿದ್ದ ಪೀಣ್ಯದಲ್ಲಿರುವ ಎಲಿವೇಟೆಡ್ ಮೇಲ್ಸೇತುವೆ ಕೇವಲ 10 ವರ್ಷಗಳಲ್ಲೇ ಸಂಚಾರಕ್ಕೆ ಯೋಗ್ಯವಲ್ಲ ಎನ್ನುವುದನ್ನು ತಿಳಿದ ನಾಗರೀಕರು ಮೇಲ್ಸೇತುವೆಗಳ ಮೇಲೆ ಓಡಾಡಲು ಹೆದರುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಬಿಬಿಎಂಪಿ, ಬಿಡಿಎ ಮತ್ತಿತರ ಸಂಸ್ಥೆಗಳು ನಿರ್ಮಿಸಿರುವ ಮೇಲ್ಸೇತುವೆಗಳ ಮೌಲ್ಯಮಾಪನ ನಡೆಸುವುದು ಸೂಕ್ತ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕಳೆದ 2010 ರಲ್ಲಿ ನವಯುಗ ಸಂಸ್ಥೆಯವರು ನಿರ್ಮಿಸಿದ್ದ ಪೀಣ್ಯ ಮೇಲ್ಸೇತುವೆ ಕೇವಲ 12 ವರ್ಷಗಳಲ್ಲೇ ಸಂಚಾರಕ್ಕೆ ಯೋಗ್ಯವಲ್ಲ ಎಂದು ನಿರ್ಧಾರವಾಗಿರುವುದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
775 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ಪೀಣ್ಯ ಮೇಲ್ಸೇತುವೆ ಮೇಲೆ ಅಂತರ್ರಾಜ್ಯ ಮತ್ತು ಜಿಲ್ಲೆಗಳಿಗೆ ಸಂಪರ್ಕಿಸುವ 4.5 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೇಲ್ಸೇತುವೆ ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು.ಕಳೆದ ಡಿ.25 ರಂದು ಮೇಲ್ಸೇತುವೆಯ 102 ಮತ್ತು 103 ನೇ ಪಿಲ್ಲರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಮೇಲ್ಸೇತುವೆ ಮೇಲಿನ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಸಲಾಗಿತ್ತು.
ತಾಂತ್ರಿಕ ದೋಷ ಸರಿಪಡಿಸುವ ಕಾಮಗಾರಿ ನಡೆಸಲಾಯಿತಾದರೂ ಮೇಲ್ಸೇತುವೆ ಭಾರಿ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿತ್ತು. ಹೀಗಾಗಿ ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುವ ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಪ್ರವೇಶ ನಿರಾಕರಿಸಿ ನಿನ್ನೆಯಿಂದ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.