Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೃಷ್ಣಾ ನದಿ ತೀರದಲ್ಲಿ ಈಗ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನದಿ ತೀರದ ಕೆಲವು ಹಳ್ಳಿಗಳಿಗೆ ಸಂಚಾರ ಕಟ್ ಆಗಿದೆ. ಬಹುತೇಕ ಗ್ರಾಮಗಳ ಜನರು ನದಿ ನೀರಿನಲ್ಲಿಯೇ ಈಜಿ ದಡ ಸೇರಿ ಜೀವ ಉಳಿಕೊಳ್ಳುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಸಮೀಪದ ನೀಲಕಂಟರಾಯನಗಡ್ಡಿ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಈಜುಕಾಯಿ ಮೂಲಕ ನದಿ ದಡವನ್ನು ಗ್ರಾಮಸ್ಥರು ಸೇರುತ್ತಿದ್ದಾರೆ. ಸುರಪುರ ತಾಲೂಕಿನ ಕಕ್ಕೇರಾ ಸಮೀಪದ ನೀಲಕಂಟರಾಯನಗಡ್ಡಿ ಗ್ರಾಮದಲ್ಲಿ ಈಗ ಪ್ರವಾಹ ಭೀತಿ ಎದುರಾಗಿದೆ. ಗ್ರಾಮಸ್ಥರು ನದಿ ದಾಟಿ ಸಂತೆಗೆ ತೆರಳಿದ ವೇಳೆ ಏಕಾಏಕಿ ನದಿಗೆ ನೀರು ಹೆಚ್ಚು ಹರಿದು ಬಂದು ಪ್ರವಾಹ ಉಂಟಾಗಿದೆ. ಗ್ರಾಮದ ಸುತ್ತಲೂ ನದಿ ನೀರು ಹರಿಯುತ್ತಿದ್ದು, ನದಿ ದಾಟಿ ಹೋಗಲು ಸಾಧ್ಯವಾಗುತ್ತಿಲ್ಲ. ಆದರೂ ನೀರನ್ನು ಲೆಕ್ಕಿಸದೆ ಗ್ರಾಮಸ್ಥರು ಈಜು ಕುಂಬಳಕಾಯಿ ಬಳಸಿ ಉಕ್ಕಿ ಹರಿಯುತ್ತಿರುವ ನದಿಯಲ್ಲೇ ನಾಲ್ಕೈದು ಜನ್ರು ಈಜಿ ದಡ ಸೇರಿದ್ದಾರೆ.
ಪ್ರತಿ ಬಾರಿಯೂ ಪ್ರವಾಹ ಬಂದಾಗಲೂ ನೀಲಕಂಟರಾಯನಗಡ್ಡಿ ದ್ವೀಪದಂತೆ ಆಗುತ್ತದೆ. ತಿಂಗಳು ವರೆಗೆ ಹೊರ ಜಗತ್ತಿನ ಸಂಪರ್ಕ ಕಡಿತಗೊಳ್ಳುತ್ತದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ 1,53,000 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಈ ಹಿನ್ನಲೆಯಲ್ಲಿ ಜಲಾಶಯದಿಂದ 1,43,000 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬೀಡಲಾಗಿದ್ದು, ನದಿಯಲ್ಲಿ ಪ್ರವಾಹ ಉಂಟಾಗಿದೆ. ಜಿಲ್ಲೆಯ ಸುರಪುರ, ಶಹಾಪುರ ಹಾಗೂ ವಡಗೇರಾ ತಾಲೂಕಿನ ವಿವಿಧ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಯಿದೆ. ಈಗಾಗಲೇ ನೀಲಕಂಟರಾಯನಗಡ್ಡಿ ಗ್ರಾಮಸ್ಥರು ಹೊರಗಿನ ಸಂಪರ್ಕ ಕಡಿದುಕೊಂಡಿದ್ದಾರೆ. ಸುಮಾರು ಒಂದು ಕಿ.ಮೀ. ದೂರದವರೆಗೆ ನದಿಯಲ್ಲಿ ಈಜುತ್ತಾ ಗ್ರಾಮಸ್ಥರು ದಡ ಸೇರಿದ್ದಾರೆ.