Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಿಟ್ಟನಹೊಸಹಳ್ಳಿ ಗೇಟ್ ಬಳಿ ಇನೋವಾ ಕಾರು ಮತ್ತು ಸ್ವಿಫ್ಟ್ ಕಾರುಗಳ ನಡುವೆ ಸಂಭವಿಸಿದ ಅಪಘಾತ ಸಂಭವಿಸಿದ್ದು,ಐದು ಮಂದಿ ಸ್ಥಳದಲ್ಲಿ ಸಾವನ್ನಪ್ಪಿ, ಐದು ಮಂದಿ ಗಾಯಗೊಂಡಿದ್ದಾರೆ.
ಇನ್ನೋವಾ ಕಾರಿನಲ್ಲಿದ್ದ ಹಾಸನ ಮೂಲದ ಶ್ರೀನಿವಾಸಮೂರ್ತಿ(74), ಜಯಂತಿ(60), ಪ್ರಭಾಕರ್ (75) ಹಾಗೂ ತಮಿಳುನಾಡು ಮೂಲದ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿರುವ ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ.ವಿಶ್ವೇಶ್ವರ ಭಟ್(50), ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಚಲ್, ಗೌತಮ್, ಕೇವಿನ್, ಸರ್ವೇಶ್ ಗಾಯಗೊಂಡಿದ್ದಾರೆ.
ಸಾವನ್ನಪ್ಪಿರುವ ತಮಿಳುನಾಡಿನ ಇಬ್ಬರ ಹೆಸರು ತಿಳಿದು ಬಂದಿಲ್ಲ.ಬೆಂಗಳೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು, ರಸ್ತೆಯ ಡಿವೈಡರ್ ದಾಟಿ ಮತ್ತೊಂದು ರಸ್ತೆಯಲ್ಲಿ ಹಾಸನ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.ಸ್ಥಳದಲ್ಲೇ ಐವರು ಸಾವನ್ನಪ್ಪಿರುವುದು
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಬೇಡಿ ನೀಡಿದ್ದಾರೆ.
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿವಾರಿಸಿ, ಕಾರುಗಳಲ್ಲಿದ್ದ ಐದು ಮಂದಿ ಮೃತರ ಶವಗಳನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.ಬಿಂಡಿಗನವಿಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಕ್ಕೆ ರಾತ್ರಿ ಸುರಿಯುತ್ತಿದ್ದ ಜಿಟಿಜಿಟಿ ಮಳೆಯೂ ಕಾರಣವಾಗಿದೆ.ಮಳೆಯಾದಾಗ ಈ ಸ್ಥಳದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ.ಹೀಗಿದ್ದರೂ ಹೈವೆಯವರಾಗಲಿ, ಪೋಲಿಸರಾಗಲಿ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ ಮಾಡಿದ್ದಾರೆ.
ಮದುವೆ ಮನೆಯಿಂದ ಸ್ಮಶಣಕ್ಕೆ ಹೋದಂತೆಯಾಗಿದೆ.ಇನ್ನೋವಾ ಕಾರಿನಲ್ಲಿದ್ದ ಹಾಸನ ಮೂಲದ ಶ್ರೀನಿವಾಸಮೂರ್ತಿ(50), ಜಯಂತಿ(45) ಅವರು ಬಾಡಿಗೆ ಕಾರಿನಲ್ಲಿ ಮದುವೆಗೆಂದು ಬೆಂಗಳೂರಿಗೆ ತೆರಳಿದ್ದರು.ಮದುವೆ ಮುಗಿಸಿಕೊಂಡು ಹಾಸನಕ್ಕೆ ವಾಪಾಸ್ಸಾಗುವಾಗ ಈ ಅವಘಡ ಸಂಭವಿಸಿದೆ.ಮದುವೆಗೆ ಹೋಗಿದ್ದವರು ಇದೀಗ ಮಸಣ ಸೇರುವಂತಾಗಿದೆ.