Publish Date: Mon, 02 Dec 2024 (16:31 IST)
Updated Date: Mon, 02 Dec 2024 (16:36 IST)
ಬೆಂಗಳೂರು: ತಮಿಳುನಾಡಿನಲ್ಲಿ ಫೆಂಗಲ್ ಚಂಡ ಮಾರುತದ ಅಬ್ಬರದಿಂದಾಗಿ ತಮಿಳುನಾಡು, ಕರ್ನಾಟಕ, ಕೇರಳ ಮೂರೂ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಾಳೆ ಮಳೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ಫೆಂಗಲ್ ಚಂಡಮಾರುತದಿಂದಾಗಿ ದಕ್ಷಿಣ ಭಾರತದಾದ್ಯಂತ ಭಾರೀ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನದಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಕರ್ನಾಟಕದ ಇತರೆ ಭಾಗಗಳಲ್ಲೂ ಇದೇ ಕತೆಯಾಗಿದೆ. ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ಎಲ್ಲಾ ಭಾಗಗಳಲ್ಲಿ ಮಳೆಯಾಗುತ್ತಿದೆ.
ನಾಳೆ ಫೆಂಗಲ್ ಚಂಡಮಾರುತ ಮತ್ತಷ್ಟು ಬಿರುಸಾಗಲಿದ್ದು, ತಮಿಳುನಾಡಿನಲ್ಲಿ ಮತ್ತೊಮ್ಮೆ ಅಬ್ಬರಿಸಲಿದೆ. ಪರಿಣಾಮ, ರಾಜ್ಯದಲ್ಲೂ ನಾಳೆ ಮಳೆ ಇನ್ನಷ್ಟು ತೀವ್ರವಾಗುವ ನಿರೀಕ್ಷೆಯಿದೆ. ಪುದುಚೇರಿಯಲ್ಲೂ ಪ್ರವಾಹ ಸದೃಶ ವಾತಾವರಣವಿದ್ದು ಶಾಲೆ, ಕಾಲೇಜುಗಳು ಬಂದ್ ಆಗಿವೆ.
ಕರ್ನಾಟಕದಲ್ಲೂ ಪರಿಸ್ಥಿತಿ ನೋಡಿಕೊಂಡು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ರಜೆ ಘೋಷಣೆ ಮಾಡಬೇಕೆಂದು ಪೋಷಕರಿಂದಲೇ ಒತ್ತಾಯಗಳು ಕೇಳಿಬರತೊಡಗಿವೆ.