Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೋಲಾರದಲ್ಲಿ ನಿಂತರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೋಲು ಖಚಿತ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭವಿಷ್ಯ ನುಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಸಿಎಂ ಆದವರು, ಡಿಸಿಎಂ ಆದವರು, ವಿಪಕ್ಷ ನಾಯಕ ಆಗಿರೋರು. ಅಂತಹವರು ಇವತ್ತು ಕ್ಷೇತ್ರಕ್ಕಾಗಿ ಅಲೆಮಾರಿ ತರಹ ಓಡಾಡುತ್ತಿದ್ದಾರೆ. ಇದು ವಿಪರ್ಯಾಸ ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯಗೆ ಕೋಲಾರವೂ ಸೇಫ್ ಅಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ನಿಂತರೂ ಸೋಲುತ್ತಾರೆ. ಕೋಲಾರದ ಜನರ ಪ್ರೀತಿ, ವಿಶ್ವಾಸಕ್ಕೆ ಮಣಿದು ಕೋಲಾರಕ್ಕೆ ಬಂದಿದ್ದೇನೆ ಎಂದು ಹೇಳುತ್ತಾರೆ. ಬಳಿಕ ಹೈಕಮಾಂಡ್ ಹೇಳಿದೆ ಹಾಗೆ ಕೇಳುತ್ತೇನೆ ಅಂತಾರೆ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಕೋಲಾರದಲ್ಲಿ ಬಿಜೆಪಿಯೇ ಗೆಲ್ಲೋದು ಎಂದು ಕೋಲಾರದ ಬಗ್ಗೆ ಭವಿಷ್ಯ ನುಡಿದರು.