Publish Date: Wed, 15 Sep 2021 (12:30 IST)
Updated Date: Wed, 15 Sep 2021 (12:22 IST)
ಮೈಸೂರು,ಸೆ.15 : ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದು, ನಾಳೆ ಅರಮನೆ ಪ್ರವೇಶಿಸಲಿವೆ. ಕೋವಿಡ್ ಸೋಂಕು ಹರಡುವ ಭೀತಿ ಹಾಗೂ ಭದ್ರತೆ ದೃಷ್ಟಿಯಿಂದ ಆನೆ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ.
ಅರಣ್ಯ ಭವನದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪ್ರತಿಯೊಬ್ಬ ರನ್ನೂ ವಿಚಾರಿಸಿದ ನಂತರವಷ್ಟೇ ಒಳಗೆ ಬಿಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಮಾವುತರು, ಕಾವಾಡಿಗರು ಹಾಗೂ ಅವರ ಸಹಾಯಕರು, ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ಯೊಂದು ಆನೆಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳಲಾಗುತ್ತಿದೆ, ದೂರ ದೂರದಲ್ಲಿ ಆನೆಗಳನ್ನು ಇರಿಸಲಾಗಿದೆ. ಪ್ರತಿ ಬಾರಿಯೂ ದಸರಾ ಆನೆಗಳು ಆಗಮಿಸಿದ ಸಂದರ್ಭ ಅವುಗಳ ಬಳಿ ನಿಂತು ಫೋಟೋ ತೆಗೆ ಸಿಕೊಳ್ಳಲು ಜನರು ಮುಗಿಬೀಳುತ್ತಾರೆ. ಆದರೆ ಕಳೆದ ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಇವುಗಳಿಗೆ ಬ್ರೇಕ್ ಬಿದ್ದಿದೆ.
ಆನೆಗಳು ಇರುವ ಜಾಗದಲ್ಲಿ ಕೆಂಪಪಟ್ಟಿ ಅಳವಡಿಸಿ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಆನೆಗಳು ನಾಳೆ (ಸೆ.16) ಅರಮನೆ ಪ್ರವೇಶಿಸಲಿದ್ದು, ಅಲ್ಲಿಯೂ ಇದೇ ರೀತಿಯ ನಿರ್ಬಂಧ ಮುಂದುವರಿಯಲಿದೆ. ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಅರಮನೆ ಆವರಣದಲ್ಲಿ ಶೆಡ್ಗಳ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಈ ಬಾರಿ ಆನೆ ಮಾವುತರು, ಕಾವಾಡಿಗಳು ಹಾಗೂ ಅವರ ಸಹಾಯಕರು ಮಾತ್ರ ಆಗಮಿಸಿದ್ದಾರೆ.ಅವರ ಕುಟುಂಬದವರಿಗೆ ಅರಣ್ಯ ಇಲಾಖೆ ಅವಕಾಶ ನೀಡಿಲ್ಲ. ಮಾವುತರು, ಕಾವಾಡಿಗಳ ಮಕ್ಕಳು ಆಗಮಿಸದ ಹಿನ್ನೆಲೆಯಲ್ಲಿ ಟೆಂಟ್ ಶಾಲೆ, ಗ್ರಂಥಾಲಯ ತೆರೆಯುತ್ತಿಲ್ಲ.
ಆನೆಗಳ ತೂಕ: ಅಭಿಮನ್ಯು 4,720 ಕೆ.ಜಿ, ಅಶ್ವತ್ಥಾಮ 3,630 ಕೆ.ಜಿ., ವಿಕ್ರಮ 3,820 ಕೆ.ಜಿ., ಧನಂಜಯ 4,050ಕೆ.ಜಿ., ಗೋಪಾಲಸ್ವಾಮಿ 4,420 ಕೆ.ಜಿ., ಕಾವೇರಿ 3,220 ಕೆ.ಜಿ., ಚೈತ್ರಾ 2,600 ಕೆ.ಜಿ., ಲಕ್ಷ್ಮೀ 2,540 ಕೆ.ಜಿ ಇವೆ.
ದಸರಾ ಆನೆಗಳು ಹಾಗೂ ಮಾವುತರಿಗೆ ಜಿಲ್ಲಾಡಳಿತ ವಿಮೆ ಮಾಡಿಸಿದೆ. ಗಂಡಾನೆಗಳಿಗೆ 3.50 ಲಕ್ಷ ರೂ., ಹೆಣ್ಣಾನೆಗಳಿಗೆ 2.50 ಲಕ್ಷ ರೂ., ಆನೆ ಮಾವುತರು ಮತ್ತು ಕಾವಾಡಿಗಳಿಗೆ ತಲಾ 1 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಆನೆಗಳಿಂದ ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟ ಉಂಟಾದರೆ ನಷ್ಟವನ್ನು ಭರಿಸಲು 30 ಲಕ್ಷ ರೂ.ಗಳ ವಿಮೆ ಮಾಡಿಸಲಾಗಿದೆ.