Publish Date: Wed, 21 Jun 2023 (15:58 IST)
Updated Date: Wed, 21 Jun 2023 (15:38 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಡೆಡ್ಲಿ ಹಿಟ್ ಅಂಡ್ ರನ್ ಪ್ರಕರಣ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ಜಾಲಿ ರೈಡ್ ಹೊರಟ ಯುವಕ-ಯುವತಿಯರು ಅಮಾಯಕನ ಪ್ರಾಣವನ್ನು ತೆಗೆದೇ ಬಿಟ್ಟಿದ್ದಾರೆ. ಅತಿ ವೇಗದ ಮೋಜಿನ ಹುಚ್ಚಾಟಕ್ಕೆ ಕುಟುಂಬದ ಆಧಾರವಾಗಿದ್ದ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದ್ದಾರೆ. ಅಪಘಾತಕ್ಕೀಡಾದ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಆತನನ್ನು ಆಸ್ಪತ್ರೆಗೆ ದಾಖಲಿಸದೇ ಅಲ್ಲಿಯೇ ಬಿಟ್ಟು ಪರಾರಿಯಾಗುವ ಮೂಲಕ ಮೃಗಗಳಿಗಿಂತಲೂ ಕಡೆಯಾಗಿ ವರ್ತಿಸಿದ್ದಾರೆ. ಆದರೆ, ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬ ಮಾತಿನಂತೆ ಮಾನವೀಯತೆ ಮರೆತು ಪರಾರಿ ಆಗುತ್ತಿದ್ದ ಲಜ್ಜಗೆಟ್ಟವರನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಿಟ್ ಅಂಡ್ ರನ್ಗೆ ಬಲಿಯಾದ ವ್ಯಕ್ತಿಯನ್ನು ಜೊಮ್ಯಾಟೋ ಡೆಲಿವರಿ ಬಾಯ್ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಎಚ್.ಡಿ.ಕೋಟೆ ಮೂಲದವನು. ಪವನ್ ಸವಾರಿ ಮಾಡುತ್ತಿದ್ದ ಬೈಕ್ಗೆ ಕಾರು ಗುದ್ದಿ ಸುಮಾರು 100 ಮೀಟರ್ ಎಳೆದೊಯ್ದಿದೆ. ರಕ್ತದ ಮಡುವಿನಲ್ಲೇ ಒದ್ದಾಡಿ ಪವನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಅಪಘಾತದ ಬೆನ್ನಲ್ಲೇ ಕಾರು ಚಾಲಕ ಬಿಟ್ಟು ಕಾರಲ್ಲಿದ್ದ ನಾಲ್ವರು ಅಲ್ಲಿಂದ ಎಸ್ಕೇಪ್ ಆಗಿದ್ದು, ಕಾರು ಚಾಲಕ ವಿನಾಯಕ್ನನ್ನು ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸರ ವಶಕ್ಕೆ ಪಡೆದಿದ್ದಾರೆ.