Publish Date: Thu, 04 Oct 2018 (10:10 IST)
Updated Date: Thu, 04 Oct 2018 (10:14 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಗರ ಪರಿಶೀಲನೆಗೆ ಹೊರಟಿದ್ದ ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ಕೆಆರ್ ಮಾರುಕಟ್ಟೆಯಲ್ಲಿನ ಅವಸ್ಥೆ ಕಂಡು ಕೆಂಡಾಮಂಡಲರಾಗಿದ್ದಾರೆ.
ಇಲ್ಲಿನ ಮೀನು ಮಾರುಕಟ್ಟೆಯಲ್ಲಿ ಕಸದ ರಾಶಿ ಕಂಡು ಕೋಪಗೊಂಡ ಪರಮೇಶ್ವರ್ ಇಲ್ಲಿನ ಅಧಿಕಾರಿಗಳು ಯಾರು ಎಂದು ವಿಚಾರಿಸಿಕೊಂಡರು. ಈ ಸಂದರ್ಭದಲ್ಲಿ ವ್ಯಾಪಾರಿಗಳು ಡಿಸಿಎಂಗೆ ದೂರುಗಳ ಸರಮಾಲೆಯನ್ನೇ ನೀಡಿದರು. ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಇಲ್ಲಿನ ಸಮಸ್ಯೆಗೆ ಅಧಿಕಾರಿಗಳು ತಲೆಕೊಡುತ್ತಿಲ್ಲ ಎಂದೆಲ್ಲಾ ವ್ಯಾಪಾರಿಗಳು ದೂರುತ್ತಿದ್ದಂತೆ ಪರಮೇಶ್ವ ಪಿತ್ತ ನೆತ್ತಿಗೇರಿತ್ತು.
ತಕ್ಷಣವೇ ಇಲ್ಲಿನ ಅಧಿಕಾರಿಗಳನ್ನು ಬದಲಾಯಿಸುವಂತೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಗೆ ಸೂಚನೆ ನೀಡಿದರು. ಅಲ್ಲದೆ, ಮಾರುಕಟ್ಟೆ ಬಗ್ಗೆ ಸರಿಯಾದ ಮಾಹಿತಿ ಕೊಡಲು ವಿಫಲವಾದ ಉಪಆಯುಕ್ತೆ ಮುನಿಲಕ್ಷ್ಮಿಯನ್ನು ಅಮಾನತುಗೊಳಿಸಿದರು.
ಈ ಸಂದರ್ಭದಲ್ಲಿ ಇಲ್ಲಿ ಅನಧಿಕೃತವಾಗಿ ಇರುವ ಕಬ್ಬಿಣದ ಅಂಗಡಿಗಳ ಬಗ್ಗೆ ವಿಚಾರಿಸಿಕೊಂಡರಲ್ಲದೆ, ಅವುಗಳ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರಿಗೆ ಅಧಿಕಾರಿಗಳ ಜತೆಗೆ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಕೂಡಾ ಸಾಥ್ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.