Publish Date: Wed, 28 Jun 2023 (13:49 IST)
Updated Date: Wed, 28 Jun 2023 (13:08 IST)
ಮಂಗಳೂರು : ಕರಾವಳಿಯಲ್ಲಿ ಮತ್ತೆ ಗೋಹತ್ಯೆ ವಿರುದ್ಧ ಹೋರಾಟಕ್ಕೆ ಹಿಂದೂ ಸಂಘಟನೆಗಳು ಸಜ್ಜಾಗಿವೆ. ಬಕ್ರೀದ್ ಸಂದರ್ಭದಲ್ಲಿ ಈ ಬಾರಿ ಅಕ್ರಮ ಗೋಹತ್ಯೆಗೆ ಅವಕಾಶ ನೀಡುವುದಿಲ್ಲ ಎಂದು ಬಜರಂಗದಳ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಮರು ತಮ್ಮ ಪವಿತ್ರ ಹಬ್ಬ ಬಕ್ರೀದ್ ಆಚರಣೆ ಸಂದರ್ಭದಲ್ಲಿ ಕುರ್ಬಾನಿ ಹೆಸರಲ್ಲಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಕೆಲವು ಕಡೆ ಇದಕ್ಕೆ ಕುರಿ- ಆಡುಗಳನ್ನು ಬಳಸಿದರೆ, ಇನ್ನೂ ಕೆಲವು ಕಡೆ ಕೋಣ, ದನಗಳನ್ನು ವಧೆಗೆ ಬಳಸುತ್ತಾರೆ. ಆದರೆ ಗೋವುಗಳನ್ನು ಕುರ್ಬಾನಿ ಹೆಸರಲ್ಲಿ ಕಡಿಯುವುದಕ್ಕೆ ಹಿಂದೂ ಸಂಘಟನೆಗಳ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕರಾವಳಿಯಲ್ಲಿ ಪ್ರಬಲವಾಗಿರುವ ಬಜರಂಗದಳ ನಾಯಕರು, ಈ ಬಾರಿ ಗೋವುಗಳ ಹತ್ಯೆಗೆ ಅವಕಾಶ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆಅಕ್ರಮ ಗೋಸಾಗಣೆ, ಹತ್ಯೆ ನಡೆಸಿದ್ದಲ್ಲಿ ಯಾವುದೇ ಬೆಲೆ ತೆತ್ತಾದರೂ ನಿಲ್ಲಿಸುತ್ತೇವೆ ಎಂದು ಬಜರಂಗಳದ ದ.ಕ ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ ಹೇಳಿದ್ದಾರೆ.
ಪ್ರಾಣಿಗಳನ್ನು ಬಲಿ ಕೊಡಲೇಬೇಕು ಎಂದಿದ್ದರೆ, ಆಡು, ಕುರಿಗಳನ್ನು ಬಳಸಿ. ಹಿಂದೂಗಳ ಪೂಜನೀಯ ಸ್ಥಾನದಲ್ಲಿರುವ ಗೋವುಗಳನ್ನು ಬಲಿ ಕೊಡಬೇಡಿ ಎಂದು ಬಜರಂಗದಳ ನಾಯಕರು ಹೇಳಿದ್ದಾರೆ. ಆದರೆ ಆಹಾರ ನಮ್ಮ ಹಕ್ಕು ಎನ್ನುವುದು ಮುಸ್ಲಿಮರ ಪ್ರತಿಪಾದನೆ.