Publish Date: Tue, 26 May 2020 (15:57 IST)
Updated Date: Tue, 26 May 2020 (15:59 IST)
ಮೊದಲ ಬಾರಿಗೆ ಕೊರೊನಾ ವಾರಿಯರ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡಿನಲ್ಲಿ ಕಾರ್ಯನಿರ್ವಹಿಸಿರುವ ಆರೋಗ್ಯ ಸಿಬ್ಬಂದಿ ಕೊರೋನಾ ವಾರಿಯರ್ ಗೆ ಕೊರೊನಾ ಸೋಂಕು ತಗುಲಿದೆ.
ಬಳ್ಳಾರಿ ನಗರದ ಜಿಲ್ಲಾ ಕೋವಿಡ್ -19 ಆಸ್ಪತ್ರೆಯ ಐಸೊಲೇಷನ್ ವಾರ್ಡಿನಲ್ಲಿ ವೈದ್ಯರು, ನರ್ಸ್ ಗಳು ಸೇರಿ 15 ಜನ 14 ದಿನಗಳ ಕಾಲ ಕಾರ್ಯ ನಿರ್ವಹಿಸಿದ್ದರು.
ನಂತರ ಅವರನ್ನು ಪವನ್ ಹೊಟೇಲ್ ನಲ್ಲಿ ಕ್ವಾರಂಟೈನ್ ಮಾಡಿತ್ತು. ಮನೆಗೆ ಕಳಿಸುವ ಮುನ್ನ ಪರೀಕ್ಷೆ ಮಾಡಿದಾಗ ಅವರಲ್ಲಿ ಓರ್ವ ಪುರುಷ ನರ್ಸ್ ಗೆ ಪಾಸಿಟಿವ್ ಬಂದಿದೆ.
ಪಿಪಿಎ ಕಿಟ್ ಬಳಕೆ ಸೇರಿದಂತೆ ಎಲ್ಲಾ ರೀತಿ ಮುಂಜಾಗ್ರತಾ ಕ್ರಮ ತೆಗೆದು ಕೊಂಡರೂ ಸೋಂಕು ತಗಲಿರುವ ಬಗ್ಗೆ ಪರಾಮರ್ಶೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.
ಉಳಿದ 14 ಜನರಲ್ಲಿ ನೆಗೆಟಿವ್ ಬಂದಿದೆ. ಆದರೂ ಅವರಲ್ಲೂ ಆತಂಕ ಶುರು ಆಗಿದೆ. ಸೋಂಕಿತನೊಂದಿಗೆ ಹೆಚ್ಚಿಗೆ ಸಂಪರ್ಕ ಹೊಂದಿದ್ದ ಹತ್ತು ಜನರನ್ನು ಮತ್ತೆ ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ಈ ಒಂದು ಹೊಸ ಪ್ರಕರಣದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 37 ಕ್ಕೇರಿದೆ. 21 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಅವರಲ್ಲಿ ಕಂಪ್ಲಿಯ ಓರ್ವ ವ್ಯಕ್ತಿ ಗುಣ ಮುಖನಾಗಿದ್ದು ಇಂದು ಬಿಡುಗಡೆಯಾಗಲಿದ್ದಾನೆ.