Publish Date: Sun, 15 Mar 2020 (15:38 IST)
Updated Date: Sun, 15 Mar 2020 (15:42 IST)
ಚಿಕನ್, ಮಟನ್, ಮೀನು ಮಾರಾಟ ಮಾಡುತ್ತಿದ್ದವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಕೃಷ್ಣರಾಜಪೇಟೆ ಪುರಸಭೆಯ ವ್ಯಾಪ್ತಿಯಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಾಂಸದಂಗಡಿಗಳು ಹಾಗೂ ಕೋಳಿ ಅಂಗಡಿಗಳನ್ನು ಬಂದ್ ಮಾಡಿಸಿ ತಾಲೂಕು ಆಡಳಿತವು ಆದೇಶ ಹೊರಡಿಸಿತ್ತು.
ಆದರೂ ಪಟ್ಟಣದ ಹೊರವಲಯದ ಮೈಸೂರು ರಸ್ತೆಯಲ್ಲಿರುವ ಅಮೀನ್ ಮಟನ್ ಸ್ಟಾಲ್ ನಲ್ಲಿ ನಾಲ್ಕೈದು ಕುರಿಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದರು. ಅಂಗಡಿಯ ಮಾಲೀಕ ಸೈಯ್ಯದ್ ಸಾಧಿಕ್ ವಿರುದ್ಧ ದೂರು ದಾಖಲಿಸಿದ್ದಾರೆ.
ಮಾಂಸದಂಗಡಿಯ ಪಕ್ಕದಲ್ಲಿರುವ ಪಂಪ್ ಹೌಸ್ ನಲ್ಲಿ ಬಚ್ಚಿಟ್ಟಿದ್ದ ಮಾಂಸ, ಚರ್ಮ ಮತ್ತು ಕುರಿ ಆಡುಗಳ ತಲೆಗಳನ್ನು ಪತ್ತೆಮಾಡಿ ವಶಕ್ಕೆ ತೆಗೆದುಕೊಂಡರು. ಕೊರೋನಾ ವೈರಸ್ ನ ಭೀತಿಯ ಹಿನ್ನೆಲೆಯಲ್ಲಿ ಪುರಸಭೆ ಹಾಗೂ ತಾಲೂಕು ಆಡಳಿತವು ಸಕಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ.
ಮಾಂಸದಂಗಡಿಗಳು, ಕೋಳಿ ಅಂಗಡಿಗಳು ಸೇರಿದಂತೆ ರಸ್ತೆ ಬದಿಯ ತಳ್ಳು ಗಾಡಿಗಳಲ್ಲಿ ಹಾಕುತ್ತಿದ್ದ ಪಾನಿಪುರಿ, ಗೋಬಿಮಂಚೂರಿ ಹಾಗೂ ಕ್ಯಾಂಟೀನ್ ಗಳನ್ನು ಬಂದ್ ಮಾಡಿಸಲಾಗಿದೆ.