Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪ್ರವರ್ಗ 2ಎ ಗೆ ಪ್ರಬಲ ಜಾತಿಗಳನ್ನು ಸೇರಿಸಬೇಕು ಎನ್ನುವ ಬೇಡಿಕೆಯ ವಿರುದ್ದ ರಾಜ್ಯಾದ್ಯಂತ ಆಂದೋಲನ ನಡೆಸುವ ಒಕ್ಕೊರಲಿನ ತೀರ್ಮಾನವನ್ನು ಇಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಕಾರ್ಯಕಾರಣಿ ಸಭೆಯಲ್ಲಿ ತಗೆದುಕೊಳ್ಳಲಾಗಿದೆ ಎಂದು ಜಾಗೃತಿ ವೇದಿಕೆಯ ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ್ ತಿಳಿಸಿದರು.
ಇಂದು ಶಾಸಕರ ಭವನದ ಸಭಾಂಗಣದಲ್ಲಿ ನಡೆದಂತಹ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಕಾರ್ಯಕಾರಣಿ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.ಪ್ರಬಲ ಜಾತಿಗಳು 2ಎ ಪ್ರವರ್ಗದಲ್ಲಿರುವ ಜಾತಿಗಳ ಮೀಸಲಾತಿಯನ್ನು ಕಬಳಿಸುವಂತಹ ಕೃತ್ಯಕ್ಕೆ ಮುಂದಾಗಿವೆ. ರಾಜಕೀಯವಾಗಿ, ಸಾಮಾಜಿಕವಾಗಿ ಒತ್ತಡ ಹೇರಲಾಗುತ್ತಿದೆ. ಇದರ ವಿರುದ್ದ ಕಳೆದ ಮಾರ್ಚ್ ತಿಂಗಳಿನಿಂದ ಬೆಂಗಳೂರು ನಗರ, ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ಹಲವಾರು ಬಾರಿ ಮನವಿಯನ್ನು ಸಲ್ಲಸಿದ್ದೇವೆ. ಆದರೆ, ಇದುವರೆಗೂ ನಮಗೆ ಸಕಾರಾತ್ಮಕವಾದಂತಹ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದರು.
ನ್ಯಾಯಮೂರ್ತಿ ಆಡಿ ನೇತೃತ್ವದ ಸಮಿತಿಯನ್ನು ರದ್ದುಗೊಳಿಸಿ: ಪ್ರಬಲ ಜಾತಿಗಳನ್ನು 2ಎ ಪ್ರವರ್ಗಕ್ಕೆ ಸೇರಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಆಡಿ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯನ್ನು ರದ್ದುಗೊಳಿಸಬೇಕು. ಈ ಸಮಿತಿಯಲ್ಲಿ ಪ್ರಬಲ ಜಾತಿಗೆ ಸೇರಿದವರನ್ನೇ ಸದಸ್ಯರನ್ನಾಗಿಸಿದ್ದು, ಇವರಿಂದ ನ್ಯಾಯಯುತವಾದಂತಹ ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದರು.