Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಾಹಿತಿ ಹಕ್ಕಿನ ಅಡಿ ಮಾಹಿತಿ ನೀಡದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮಾಹಿತಿ ಹಕ್ಕಿನಡಿ ಎಸ್.ಪಿ.ಕೃಷ್ಣೇಶ್ ಎಂಬುವರು ಕೋರಲಾಗಿದ್ದ ಮಾಹಿತಿಯನ್ನು ನೀಡದ ಕಾರಣ 2008ರಲ್ಲಿ ದೊಡ್ಡಬಳ್ಳಾಪುರ ಸರ್ಕಲ್ ಇನ್ಸ್ಪೆಕ್ಟರ್ಗಳಾಗಿ ಕರ್ತವ್ಯ ನಿರ್ವಹಿಸಿದ್ದ ಎಸ್.ಟಿ. ಸಿದ್ದಲಿಂಗಪ್ಪ ಹಾಗೂ ವಿ. ಶಿವಾರೆಡ್ಡಿ ಅವರ ವಿರುದ್ಧ ಕರ್ನಾಟಕ ಸ್ಟೇಟ್ ಪಬ್ಲಿಕ್ ರೆಕಾರ್ಡ್ಸ್ ರೂಲ್ಸ್ 2013ರ ಪ್ರಕಾರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2008ರಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಲಕ್ಷ್ಮೀನಾರಾಯಣಪ್ಪ ಎಂಬುವವರು ಡಿ.ಎಂ. ನಾಗಪ್ಪ ಎಂಬುವವರ ವಿರುದ್ಧ ದಾಖಲಿಸಿದ್ದ ದೂರಿನ ನಕಲು ಪ್ರತಿಗಳನ್ನು ನೀಡುವಂತೆ ಮಾಹಿತಿ ಹಕ್ಕಿನಡಿ ಕೋರಲಾಗಿತ್ತು. ಆದರೆ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು ಎಂದು ಕೃಷ್ಣೇಶ್ ತಿಳಿಸಿದ್ದಾರೆ.
ರಾಜ್ಯ ಮಾಹಿತಿ ಆಯೋಗದ ಸೂಚನೆಯಂತೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ಜಿ.ಸಿದ್ದರಾಜು ನೀಡಿರುವ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.