Publish Date: Sat, 04 Oct 2025 (21:00 IST)
Updated Date: Sat, 04 Oct 2025 (21:02 IST)
ಬೆಂಗಳೂರು: ಜಾತಿಗಣತಿಗೆ ವಿಕಲಚೇತನರನ್ನೂ ಬಳಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಸಮೀಕ್ಷೆಗೆ ರಾಜ್ಯದ ವಿಶೇಷ ಚೇತನ ನೌಕರರನ್ನೂ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ,ಮಾನವೀಯ ಸ್ಪಂದನೆಯಿಲ್ಲದ ಸರ್ಕಾರದ ಧೋರಣೆಯನ್ನು ಇದು ಪ್ರತಿಬಿಂಬಿಸಿದೆ.
ವಿಶೇಷ ಚೇತನ ನೌಕರರನ್ನು ಸಮೀಕ್ಷೆ ಕಾರ್ಯದಿಂದ ಕೈ ಬಿಟ್ಟು ಸಮೀಕ್ಷೆ ಸಂಬಂಧದ ಕಛೇರಿ ಕೆಲಸಗಳಿಗೆ ಬಳಸಿಕೊಳ್ಳಬಹುದಿತ್ತು, ಆದರೆ ವಿವೇಚನಾ ರಹಿತ ಆಡಳಿತ ವ್ಯವಸ್ಥೆಯಿಂದ ವಿಶೇಷ ಚೇತನ ನೌಕರರು ಸಂಕಷ್ಟಕ್ಕೆ ಸಿಲುಕಿರುವುದು ನಿಜಕ್ಕೂ ನೋವಿನ ಸಂಗತಿ, ಕಾಂಗ್ರೆಸ್ ಸರ್ಕಾರದ ಈ ನಡೆ ಖಂಡನೀಯ.
ಈ ಸಂಬಂಧ ಈಗಾಗಲೇ ಅಂಗವಿಕಲ ಸಂಘ, ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಈ ರೀತಿಯ ಅಪ್ರಬುದ್ಧ ನಡೆಯಿಂದ ಹಿಂದೆ ಸರಿದು ವಿಶೇಷ ಚೇತನ ನೌಕರರನ್ನು ಗಣತಿ ಕಾರ್ಯದಿಂದ ಕೈ ಬಿಡಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ ಎಂದಿದ್ದಾರೆ.