Publish Date: Fri, 10 Oct 2025 (15:20 IST)
Updated Date: Fri, 10 Oct 2025 (15:31 IST)
ಬೆಂಗಳೂರು: ರಾಜ್ಯ ಸರಕಾರವು ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿ ಗಣತಿ ವಿಷಯದಲ್ಲಿ ತೀರ್ಮಾನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಾತಿ ಗಣತಿ ವಿಚಾರದಲ್ಲಿ ಗಣತಿದಾರ ಶಿಕ್ಷಕವೃಂದಕ್ಕೂ ಸಮಸ್ಯೆ ಆಗುತ್ತಿದೆ. ರಜೆ ದಿನಗಳನ್ನೂ ವಿಸ್ತರಿಸಿದ್ದರಿಂದ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಸಮಸ್ಯೆ ಆಗಲಿದೆ. ಸರಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳಿಗೆ ಒಂದೊಂದು ದಿನವೂ ಅಷ್ಟೇ ಮಹತ್ವದ್ದು ಎಂದು ನುಡಿದರು. ಶಾಲೆಗೆ ರಜೆ ಘೋಷಿಸಿ ಶಾಲಾ ಮಕ್ಕಳಿಗೂ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ಕರೆದಿದ್ದು, ಶಾಸಕರಿಗೆ ಸಭೆಯ ಕಾರ್ಯಸೂಚಿಯನ್ನೇ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜಿಬಿಎ ಅಜೆಂಡವನ್ನೂ ಕೊಡದೆ ಗೌಪ್ಯವಾಗಿ ಸಭೆ ಮಾಡುತ್ತಿದ್ದಾರೆ. ಡಿಸೆಂಬರ್ನಲ್ಲಿ ಚುನಾವಣೆ ನಡೆಸುವುದಾಗಿ ಹೇಳುತ್ತಾರೆ. ಎಲ್ಲಿದೆ ತಯಾರಿ? ಎಂದು ಪ್ರಶ್ನಿಸಿದರು. ಎಷ್ಟು ಅಧಿಕಾರಿಗಳು ಬೇಕು? ಮೂಲಭೂತ ಸೌಕರ್ಯಗಳು, ಯಾವುದೂ ಇಲ್ಲದೇ ರಾಜಕೀಯ ಚಟಕ್ಕೆ ಘೋಷಣೆ ಮಾಡುತ್ತಾರೆ. ಯಾವುದೇ ಯೋಜನೆ ಇಲ್ಲದೇ ಹೊರಟಿದ್ದಾರೆ ಎಂದರು.
ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ
ಬೆಂಗಳೂರಿನ ಜನತೆ ಈ ಸರಕಾರಕ್ಕೆ ಛೀ ಥೂ ಎಂದು ಉಗುಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿಯವರ ಮನೆ ಮುಂದೆ ಗುಂಡಿ ಇದೆ; ಅಲ್ಲಿ ಗುಂಡಿ ಇದೆ ಎಂದು ಲೆಕ್ಕ ಹಾಕಲು ಹೊರಟಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ ಬಂದಿದೆ ಎಂದು ವಿಜಯೇಂದ್ರ ಅವರು ಗಮನ ಸೆಳೆದರು.
ದೊಡ್ಡ ಮನುಷ್ಯರು ಪ್ರಧಾನಿ, ಲಂಡನ್ ಕುರಿತು ಮಾತನಾಡುತ್ತಾರೆ ಎಂದರಲ್ಲದೇ ಲಂಡನ್ ಬಗ್ಗೆ ಮಾತನಾಡಲು ನೀವು ಬೇಕೇ ಎಂದು ಪ್ರಶ್ನಿಸಿದರು. ಬೆಂಗಳೂರಿನ ಮಹಾಜನತೆ ರಾಜ್ಯ ಸರಕಾರದಿಂದ ಉತ್ತರ ಕೇಳುತ್ತಿದ್ದಾರೆ. ತುರ್ತಾಗಿ ಗುಂಡಿ ಮುಚ್ಚುವ ಕೆಲಸ ಆಗಬೇಕೆಂದು ಜನರು ಅಪೇಕ್ಷೆ ಪಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸರಕಾರದಲ್ಲಿ ಎಲ್ಲವೂ ಗೊಂದಲಮಯವಾಗಿದೆ. ಮೊದಲೇ ರೈತರು ಪರದಾಡುತ್ತಿದ್ದಾರೆ. ತೀವ್ರ ಸಂಕಷ್ಟದಲ್ಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ರೀತಿ ಅತಿವೃಷ್ಟಿ ಆದರೂ ಕೃಷಿ ಸಚಿವರಿಗೆ ಅಲ್ಲಿ ಹೋಗಬೇಕೆಂದು ಅನಿಸುವುದಿಲ್ಲ. ಕಂದಾಯ ಸಚಿವರಿಗೆ ಹೋಗಬೇಕೆಂದು ಅನಿಸುತ್ತಿಲ್ಲ; ಕಂದಾಯ, ಕೃಷಿ ಸಚಿವರಿಗೆ ಅಲ್ಲಿ ಹೋಗಲು ಸಮಯ ಇಲ್ಲವೆಂದಾದರೆ, ಅವರು ಸಚಿವರಾಗಿ ಯಾಕೆ ಇರಬೇಕು ಎಂದು ಕೇಳಿದರು. ಆ ಭಾಗದ ರೈತರಿಗೆ ಸ್ಪಂದಿಸದೇ ಇದ್ದರೆ ಈ ಸಚಿವರು ರೈತರ ಪಾಲಿಗೆ ಬದುಕಿದ್ದೂ ಸತ್ತಂತೆ ಎಂದು ತಿಳಿಸಿದರು.
ರೈತರು ಪರಿಹಾರಕ್ಕೆ ಇನ್ನೆಷ್ಟು ದಿನ ಕಾಯಬೇಕು
ನಾನು, ವಿಪಕ್ಷ ನಾಯಕರು, ಬಿಜೆಪಿ ನಿಯೋಗ ಕಲ್ಯಾಣ ಕರ್ನಾಟಕಕ್ಕೆ ಹೋಗಲಿಲ್ಲವೆಂದಾದರೆ, ಮುಖ್ಯಮಂತ್ರಿಗಳು ಇಲ್ಲೇ ಎ.ಸಿ. ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ನಲ್ಲಿ ತೀರ್ಮಾನ ಮಾಡುತ್ತಿದ್ದರು. ನಾವು ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ ಪ್ರವಾಸ ಮಾಡಿದ್ದೇವೆ. ಅಶೋಕ್ ಅವರು, ಬೆಳಗಾವಿ, ಬಾಗಲಕೋಟೆ ಕಡೆ ಹೋದರು ಎಂದು ಗಮನ ಸೆಳೆದರು.
ವಿಪಕ್ಷದವರು ಎಲ್ಲವನ್ನೂ ಟೀಕಿಸುತ್ತಾರೆ ಎಂದು ಭಾವಿಸುವ ಅಗತ್ಯವಿಲ್ಲ; ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ರಾಜ್ಯ ಸರಕಾರದ ಆದ್ಯ ಕರ್ತವ್ಯ. 10 ದಿನಗಳಲ್ಲಿ ಪರಿಹಾರ ಮೊತ್ತ ಕೊಡುವುದಾಗಿ ಸಚಿವ ಕೃಷ್ಣಬೈರೇಗೌಡರು ಹೇಳಿದ್ದಾರೆ. ರೈತರು ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದರು.
ಮಂಡ್ಯದಲ್ಲೂ ಮೈ ಶುಗರ್ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದ ಅವರು, ಜಿಬಿಎ ಸಭೆಗೆ ಗೈರಾಗುವ ತೀರ್ಮಾನ ತೆಗೆದುಕೊಂಡಂತೆ ಕಾಣುತ್ತದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಮೊದಲ ಸಭೆ ಅಜೆಂಡ ಗೊತ್ತಿಲ್ಲದೇ ಹೋಗಿ ಮಾಡುವುದಾದರೂ ಏನು ಎಂದು ಮರುಪ್ರಶ್ನೆ ಹಾಕಿದರು. ಜಿಬಿಎ ಬಗ್ಗೆ ಆಡಳಿತ ಪಕ್ಷದಲ್ಲೂ ವಿರೋಧಗಳಿವೆ. ಎಲ್ಲ ಗೊಂದಲದ ನಡುವೆ ತೇಪೆ ಹಚ್ಚುವ ಕೆಲಸ ಮಾಡಲು ಇವರು ಹೊರಟಿದ್ದಾರೆ ಎಂದರು. ರಿಯಲ್ ಎಸ್ಟೇಟ್ ಮಾಫಿಯ ಜೊತೆ ಸರಕಾರ ಸೇರಿ ಆಡಳಿತ ನಡೆಸುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಆಡಳಿತ ಪಕ್ಷದ ಸಚಿವರು, ಶಾಸಕರ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷದಲ್ಲಿ ಆಲ್ ಈಸ್ ನಾಟ್ ವೆಲ್ ಎಂಬುದು ಸ್ಪಷ್ಟವಾಗುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ರಾಜ್ಯದಲ್ಲಿ ರಾಜಕೀಯ ವಿದ್ಯಮಾನಗಳು ಪ್ರಾರಂಭ ಆಗಿವೆ. ಬಿಹಾರ ಚುನಾವಣೆ ಬಳಿಕ ಇದು ತಾರ್ಕಿಕ ಅಂತ್ಯಕ್ಕೆ ಹೋಗಲಿದೆ ಎಂದು ಆಡಳಿತ ಪಕ್ಷದವರೇ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.