Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರಿನ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಎನ್. ಮಹೇಶ್ ಬಿಜೆಪಿಗೆ ಸೇರ್ಪಡೆಯಾದರು. ಮಹೇಶ್ ಅವರಿಗೆ ಪಕ್ಷದ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಮಹೇಶ್ ಚಳುವಳಿಯ ಹಿನ್ನೆಲೆಯಿಂದ ಬಂದವರು. ಅವರ ಸಂಘಟನಾ ಶಕ್ತಿ ಬಹು ದೊಡ್ಡದು. ಅವರು ಶಾಸಕರಾಗುವ ಮುನ್ನವೇ ದಲಿತರ ಹೃದಯ ಗೆದ್ದವರು. ಕೊಳ್ಳೆಗಾಲದ ಎಲ್ಲ ಜನಾಂಗ ಅವರನ್ನ ಆರಿಸಿದೆ ಎಂದರು.
ನಮ ಪಕ್ಷದ ಸಿದ್ಧಾಂತ ಮನವರಿಕೆಯಾದ ಮೇಲೆ ಮಹೇಶ್ ಪಕ್ಷಕ್ಕೆ ಬಂದಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಸರಕಾರಕ್ಕೆ ಬೆಂಬಲ ನೀಡಿದ್ದರು. ಈ ಹಿಂದೆ ಯಡಿಯೂರಪ್ಪನವರಿಗೆ ಸಹಕಾರ ಕೊಟ್ಟಿದ್ದರು. ಇಂದು ಅವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅವರ ಸೇವೆಯನ್ನ ಪಕ್ಷ ಬಳಸಿಕೊಳ್ಳಲಿದೆ ಎಂದು ಅವರು ಹೇಳಿದರು.
ವಿಜಯೇಂದ್ರ ಮೈಸೂರು ಭಾಗದಲ್ಲಿ ಸುತ್ತಾಡಿದ್ದಾರೆ. ಅವರ ಶ್ರಮಕ್ಕೆ ಮಹೇಶ್ ಶಕ್ತಿ ಸೇರಿದರೆ ಬಲ. ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಆ ಭಾಗದಲ್ಲಿ ಸಾಮರಸ್ಯದ ಅನ್ಯೋನ್ಯತೆ ಸ್ಥಾಪನೆಯಾಗಲಿದೆ. ಈಗ ಹೊಸ ಸರ್ಕಾರ ಬಂದಿದೆ. ಈ ವೇಳೆಯೇ ಈ ಸಂದೇಶವೂ ಸೇರಿಕೊಂಡಿದೆ ಎಂದು ಬೊಮ್ಮಾಯಿ ನುಡಿದರು.