Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಗದಗ : ಬಿಜೆಪಿ ಸರ್ಕಾರ, ಹಗರಣಗಳ ಸರ್ಕಾರ. ಸಿ.ಎಂ.ಬೊಮ್ಮಾಯಿ ಅವರು ಎಲೆಕ್ಟೆಡ್ ಸಿಎಂ ಅಲ್ಲ, ಅಪಾಯಿಂಟೆಡ್ ಸಿಎಂ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದರು.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಡ್ಲೇರಿ ಸಿದ್ದೇಶ್ವರ ದೇವಸ್ಥಾನ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹುದ್ದೆ ಅಕ್ರಮದ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದರು.
ಬೊಮ್ಮಾಯಿ ಅವರೇ ಪೊಲೀಸ್ ಆಫೀಸರ್ಗಳನ್ನು ಯಾಕೆ ಟ್ರಾನ್ಸ್ಫರ್ ಮಾಡಿದ್ರಿ? ಅಕ್ರಮ ನಡೆದಿದೆಯೋ ಇಲ್ವೊ? ಅಕ್ರಮ ನಡೆದಿಲ್ಲ ಅನ್ನೋದಾದ್ರೆ ಲಿಸ್ಟ್ ಯಾಕೆ ರದ್ದು ಮಾಡಿದ್ರಿ? ಮರುಪರೀಕ್ಷೆಗೆ ಯಾಕೆ ಆದೇಶ ಮಾಡಿದ್ರಿ? ಸರ್ಕಾರ ಮಂತ್ರಿಗಳನ್ನು ರಕ್ಷಣೆ ಮಾಡ್ತಿದೆ. ಪ್ರಕರಣ ಮುಚ್ಚಿಹಾಕುವ ಪ್ರಯತ್ನವೂ ಮಾಡ್ತಿದೆ ಎಂದು ಆರೋಪಿಸಿದರು.
ಸಚಿವ ಅಶ್ವಥ್ ನಾರಾಯಣ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿಯವರಿಗೆ ಮಾನಮರ್ಯಾದೆ ಯಾವುದೂ ಇಲ್ಲ. ಅಶ್ವಥ್ ನಾರಾಯಣ ಅವರ ಇಬ್ಬರು ಸಂಬಂಧಿಕರು ಆಯ್ಕೆಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದವರು ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇವೆ ಎಂದಿದ್ದ ಗೃಹ ಸಚಿವರಿಗೆ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹೋಮ್ ಮಿನಿಸ್ಟರ್ ಮೊದಲು ರಾಜೀನಾಮೆ ಕೊಡಪ್ಪ. ಆಮೇಲೆ ಮುಟ್ಟಿ ನೋಡಿಕೊಳ್ಳುವಂತೆ ಮಾಡುವೆಯಂತೆ ಎಂದು ಚಾಟಿ ಬೀಸಿದರು.