Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಳೆದ 14 ತಿಂಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸೊರಗಿದ ಬಿಬಿಎಂಪಿಯಲ್ಲಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಈಗ ಮತ್ತೆ ಸಂಚಲನ ಪ್ರಾರಂಭವಾಗಿದೆ. ಶೀಘ್ರದಲ್ಲಿಯೇ ಚುನಾವಣೆ ಘೋಷಣೆಯಾಗಲಿದೆಯೇ ಎಂಬ ನಿರೀಕ್ಷೆ ನಗರವಾಸಿಗಳಲ್ಲಿ ಹೆಚ್ಚಾಗಿದೆ.ಕರ್ನಾಟಕದ ವಿವಿಧ ಭಾಗಗಳ ಜನರಷ್ಟೇ ಅಲ್ಲದೆ, ದೇಶ ವಿದೇಶಗಳ ವಿವಿಧ ಭಾಗಗಳ ಜನ ಬೆಂಗಳೂರಿನಲ್ಲಿ ನೆಲೆಸಿದ್ದು, ಕಾಸ್ಮೊಪಾಲಿಟನ್ ಸಿಟಿ ಎಂದು ಗುರುತಿಸಿಕೊಂಡಿದೆ. ಆದರೆ, ರಸ್ತೆ, ನೀರು, ಒಳಚರಂಡಿ, ಪಾರ್ಕಿಂಗ್, ಶೌಚಾಲಯಗಳು, ಸ್ಲಂಗಳ ನಿವಾರಣೆ ಸೇರಿ ಅಗತ್ಯ ಮೂಲಸೌಕರ್ಯದಂತಹ ವಿಷಯಗಳು ಮಾತ್ರ ತನಗೆ ಸಂಬಂಧವೇ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ. ಇದಕ್ಕೆ ಕಾರಣ ಜನಪ್ರತಿನಿಧಿಗಳ ಆಡಳಿತವೇ ಬೆಂಗಳೂರಿಗೆ ಮರೀಚಿಕೆ ಆಗಿರುವುದು.
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿಯ ಮಹಾನಗರ ಪಾಲಿಕೆಗಳಿಗೆ ಕಳೆದ ಸೆಪ್ಟರಂಬರ್ನಲ್ಲಿಯೇ ಮತದಾನ ನಡೆದು ಜನಪ್ರತಿನಿಧಿಗಳ ಆಡಳಿತ ಜಾರಿಯಾಗಿದೆ. ಆದರೆ, ಬೆಂಗಳೂರಿಗೆ ಆ ಭಾಗ್ಯ ಇನ್ನೂ ದೊರೆಯುತ್ತಿಲ್ಲ.