Publish Date: Mon, 24 Jul 2023 (13:41 IST)
Updated Date: Tue, 25 Jul 2023 (13:46 IST)
ರಾಯಚೂರು : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು 19 ಗ್ರಾಮಗಳಲ್ಲಿ ಸಾರ್ವಜನಿಕ ಮತ್ತು ಗುಂಪಾಗಿ ಮೊಹರಂ ಆಚರಣೆಗೆ ನಿರ್ಬಂಧ ವಿಧಿಸಿದೆ.
ಕಳೆದ ಬಾರಿ ಈ 19 ಗ್ರಾಮಗಳಲ್ಲಿ ಮೊಹರಂ ಆಚರಣೆ ವೇಳೆ ಗಲಾಟೆ ನಡೆದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರಾಯಚೂರು ಜಿಲ್ಲಾಡಳಿತವು ಈ ನಿರ್ಧಾರ ಕೈಗೊಂಡಿದೆ.
ಜಿಲ್ಲಾಡಳಿತ ಸೂಚನೆಯಂತೆ, ಸಿಂಧನೂರು ತಾಲೂಕಿನ ಗಿಣಿವಾರ, ಕುನ್ನಟಗಿ, ಇಜೆ ಉದ್ಭಾಳ, ಉಪ್ಪಳ, ಎಲೆಕೂಡ್ಲಗಿ, ಇಜೆ ಬಸ್ಸಾಪುರ, ಆಯನೂರು, ತಿಪ್ಪನಹಟ್ಟಿ, ಮಾನ್ವಿ ತಾಲೂಕಿನ ಸಿರವಾರ ಪಟ್ಟಣ, ಕಡದಿನ್ನಿ, ಕವಿತಾಳ ಪಟ್ಟಣ, ಬಾಗಲವಾಡ, ಕಡದಿನ್ನಿ, ಬೊಮ್ಮನಾಳ, ಅಮೀನಗಡ, ಜಾಗೀನಪನ್ನೂರು, ನಂದಿಹಾಳ ಜಾನೇಕಲ್ ಗ್ರಾಮದಲ್ಲಿ, ಮಸ್ಕಿ ತಾಲೂಕಿನ ತಲೇಖಾನ ಗ್ರಾಮಗಳಲ್ಲಿ ಮೊಹರಂ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ.
ಈ ಬಾರಿ ನಿರ್ಬಂಧ ವಿಧಿಸಲಾದ ಗ್ರಾಮಗಳಲ್ಲಿ ಈ ಹಿಂದೆ ನಡೆದ ಮೊಹರಂ ಆಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಮಾರಾಮಾರಿ ನಡೆದಿತ್ತು. ದೊಣ್ಣೆ, ಬಡಿಗೆಗಳನ್ನು ಹಿಡಿದುಕೊಂಡು ಬಡಿದಾಡಿಕೊಂಡಿದ್ದರು. ಇದರಿಂದ ಕಾಲ್ತುಲಿತವೂ ನಡೆದಿತ್ತು. ಇದೇ ಕಾರಣಕ್ಕೆ ಮೊಹರಂ ಆಚರಣೆಗೂ ಮುನ್ನ ಬಂದ ಗುಪ್ತ ಮಾಹಿತಿ ಆಧರಿಸಿ ದ್ವೇಷ, ಗಲಾಟೆ ನಿಗ್ರಹ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕ ಮೊಹರಂ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ.