Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಗಳೂರು : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ಗೊಳಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಇನ್ಲ್ಯಾಂಡ್ ಅಪಾರ್ಟ್ಮೆಂಟ್ ನಿವಾಸಿ ಅಝ್ವೀನ್ ಸಿ. (24), ಬೈಕಂಪಾಡಿ ಜೋಕಟ್ಟೆಯ ಕೆಬಿಎಸ್ ಬೊಟ್ಟು ಹೌಸ್ ನಿವಾಸಿ ಸಫ್ನಾ ಅಲಿಯಾಸ್ ಹತೀಜಮ್ಮ (23) ಬಂಧಿತ ಆರೋಪಿಗಳು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ್ದಾರೆ.
ದುಬೈನಲ್ಲಿ ಉದ್ಯೋಗದಲ್ಲಿದ್ದು, ವಾಪಾಸಾಗಿದ್ದ ವ್ಯಕ್ತಿಯೊಬ್ಬರ ಮನೆಗೆ ಅಝ್ವಿನ್ ಹಾಗೂ ಆತನ ಗೆಳತಿ ಸಫ್ನಾ ಅಲಿಯಾಸ್ ಹತಿಜಮ್ಮ ಜುಲೈ 19ರಂದು ಪಾರ್ಟಿ ಮಾಡುವ ನೆಪದಲ್ಲಿ ಹೋಗಿ ಆ ವ್ಯಕ್ತಿಗೆ ಮದ್ಯ ಕುಡಿಸಿದ್ದಾರೆ. ಮದ್ಯಕ್ಕೆ ಅಮಲು ಬರುವ ಪದಾರ್ಥ ಬೆರೆಸಿದ್ದು, ಇದರಿಂದ ವ್ಯಕ್ತಿ ಮೂರ್ಛೆ ಹೋಗಿದ್ದಾರೆ. ಬಳಿಕ ಅವರನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಿದ್ದಾರೆ. ಬಳಿಕ ಮನೆಯ ಕಪಾಟಿನಲ್ಲಿದ್ದ 2.12 ಲಕ್ಷ ರೂ. ನಗದು ಹಾಗೂ ವ್ಯಕ್ತಿಯ ಕೈಯ್ಯಲ್ಲಿದ್ದ ನವರತ್ನದ ಉಂಗುರವನ್ನು ಎಗರಿಸಿ ಅಲ್ಲಿಂದ ಪರಾರಿಯಾಗಿದ್ದರು.
ಮರುದಿನ ವಂಚನೆಗೊಳಗಾಗಿದ್ದ ವ್ಯಕ್ತಿ ಅಝ್ವೀನ್ ಆರೋಪಿಗಳ ಮನೆಗೆ ಹೋಗಿ ನಗದು ಹಾಗೂ ಉಂಗುರ ಮರಳಿ ನೀಡುವಂತೆ ಕೇಳಿದ್ದಾನೆ. ಇಲ್ಲದಿದ್ದರೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದ್ದಾರೆ. ಈ ಸಂದರ್ಭ ಆರೋಪಿಗಳು ಹಣವನ್ನು ನಾಳೆ ಕೊಡುವುದಾಗಿ ಹೇಳಿದ್ದಲ್ಲದೆ, ದೂರು ನೀಡದಂತೆ ನಂಬಿಸಿದ್ದರು.
ಆದರೆ ಮತ್ತೆ ಆರೋಪಿಗಳು ಆ ವ್ಯಕ್ತಿಯ ಮನೆಗೆ ಹೋಗಿ, ಹಣ ಮತ್ತು ಉಂಗುರ ನೀಡುವುದಿಲ್ಲ. ಪೊಲೀಸ್ ದೂರು ನೀಡಿದರೆ ಮೊಬೈಲ್ನಲ್ಲಿ ಮಾಡಿರುವ ವಿಡಿಯೋ ಚಿತ್ರೀಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆಯೊಡ್ಡಿದ್ದಾರೆ. ಮಾತ್ರವಲ್ಲದೆ ತನ್ನ ತಂಗಿಯ ಬಲಾತ್ಕಾರಕ್ಕೆ ಯತ್ನಿಸಿರುವುದಾಗಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.