Publish Date: Tue, 28 Feb 2023 (11:17 IST)
Updated Date: Tue, 28 Feb 2023 (09:48 IST)
ರಾಮನಗರ : 2023ರ ಚುನಾವಣೆ ನನ್ನ ಕೊನೆಯ ಚುನಾವಣೆ. 2028ರ ಚುನಾವಣೆಗೆ ನಿಮ್ಮಲ್ಲೇ ಒಬ್ಬರು ಅಭ್ಯರ್ಥಿ ಆಗಬೇಕು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವದಲ್ಲಿ ಮಾತನಾಡಿದ ಅವರು, ಮಂಡ್ಯದ ಕಾರ್ಯಕರ್ತರು ಕೆ.ಆರ್.ಪೇಟೆಯಲ್ಲಿ ಬಂದು ಚುನಾವಣೆಗೆ ನಿಲ್ಲಿ ಎಂದು ಮನವಿ ಮಾಡಿದರು. ಚನ್ನಪಟ್ಟಣದಲ್ಲಿ ನಿಮ್ಮನ್ನು ಸೋಲಿಸಲು ಮಸಲತ್ತು ಮಾಡಿದ್ದಾರೆ ಎಂದರು. ಆದರೆ ನಾನು ಇದಕ್ಕೆ ಹೆದರುವುದಿಲ್ಲ ಎಂದರು.
ಚನ್ನಪಟ್ಟಣ ಕ್ಷೇತ್ರದ ಜನರು ಯಾವತ್ತೂ ನನ್ನನ್ನು ಕೈಬಿಡಲಿಲ್ಲ. ನಾನು ಬೇರೆಯವರ ರೀತಿ ಕ್ಷೇತ್ರ ಬದಲಾಯಿಸೋಕೆ ಟೂರಿಂಗ್ ಟಾಕೀಸ್ ಅಲ್ಲ. ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗುವ ಪ್ರಶ್ನೆಯೇ ಇಲ್ಲ.
ಕಾರ್ಯಕರ್ತರು ಒಗ್ಗಟ್ಟಾಗಿ. ನಿಮ್ಮಲ್ಲೊಬ್ಬ ಲೀಡರ್ ಹುಟ್ಟಿಕೊಳ್ಳಬೇಕು. ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿರಿ. 2028ಕ್ಕೆ ಓರ್ವ ಅಭ್ಯರ್ಥಿಯನ್ನು ನೀವೇ ತಯಾರಿಸಿ ಎಂದು ಸ್ಪಷ್ಟನೆ ನೀಡಿದರು.