Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ರಾಜ್ಯದಲ್ಲಿ ಯಾವ ರೈತರು ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವಂತೆ ಮನವಿ ಮಾಡಿಲ್ಲ.
ಹಾಗಾಗಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿ ಆಗಿರೋ ಎಪಿಎಂಸಿ ಕಾಯ್ದೆ ರದ್ದು ಮಾಡೋದಿಲ್ಲ ಅಂತ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ರದ್ದು ಮಾಡಬೇಕು, ಈ ಕಾಯ್ದೆಯಿಂದ ರೈತರಿಗೆ ಅನ್ಯಾಯ ಆಗುತ್ತದೆ.
ಕೇಂದ್ರ ಸರ್ಕಾರ ಈಗಾಗಲೇ ಕಾಯ್ದೆ ರದ್ದು ಮಾಡಿದೆ. ಡಬಲ್ ಎಂಜಿನ್ ಸರ್ಕಾರ ಇಲ್ಲಿ ಬೇರೆ ನಿರ್ಧಾರ ಮಾಡಿದೆ. ಕೂಡಲೇ ಕಾಯ್ದೆ ರದ್ದು ಮಾಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಎಸ್.ಟಿ ಸೋಮಶೇಖರ್, ಯಾವುದೇ ಕಾರಣಕ್ಕೂ ಎಪಿಎಂಸಿ ಕಾಯ್ದೆ ರಾಜ್ಯದಲ್ಲಿ ವಾಪಸ್ ಪಡೆಯಲ್ಲ (ರದ್ದು ಮಾಡುವುದಿಲ್ಲ) ಎಂದು ಪುನರುಚ್ಚರಿಸಿದರು.
ಕೇಂದ್ರದ ಕಾಯ್ದೆ ಬೇರೆ ನಮ್ಮ ಕಾಯ್ದೆ ಬೇರೆ. ರೈತರಿಗೆ ಅನುಕೂಲ ಮಾಡಲು ಕಾಯ್ದೆ ತಿದ್ದುಪಡಿ ಮಾಡಿದ್ದೇವೆ. ರೈತರು ತಮ್ಮ ಬೆಳೆ ಎಪಿಎಂಸಿಯಲ್ಲಿ ಬೇಕಾದರೂ ಮಾರಾಟ ಮಾಡಬಹುದು ಅಥವಾ ಎಲ್ಲಿ ಬೇಕಾದ್ರು ಖಾಸಗಿಯಾಗಿ ಬೇಕಾದ್ರು ಮಾರಾಟ ಮಾಡಬಹುದು. ಅದಕ್ಕಾಗಿಯೇ ನಾವು ಕಾಯ್ದೆ ತಂದಿದ್ದೇವೆ ಎಂದು ಹೇಳಿದರು.