Publish Date: Mon, 17 Apr 2023 (16:52 IST)
Updated Date: Mon, 17 Apr 2023 (17:02 IST)
ಪುಲಕೇಶಿನಗರದ ಕಾಂಗ್ರೆಸ್ ಶಾಸಕರಾಗಿದ್ದ ಅಖಂಡ ಶ್ರೀನಿವಾಸ್ ಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಾರೆ. ನಿನ್ನೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಖಂಡ ಶ್ರೀನಿವಾಸ್ ಮೂರ್ತಿ ಅವರು, ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.ಇದಕ್ಕೂ ಮೊದಲು ತಮ್ಮ ನಿವಾಸದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಸುದ್ದಿಗೋಷ್ಠಿಯನ್ನ ನಡೆಸಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದರು.
ನನಗೆ ಟಿಕೆಟ್ ತಪ್ಪಿಸಿರುವುದು. ಅತಿ ಹೆಚ್ಚು ಮತ ಗಳಿಸಿ ಗೆದ್ದಿದ್ದ ನನಗೆ ಅವಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಜಮೀರ್ ಅಹಮದ್ ಮಾತ್ರ ನನಗೆ ಸಹಾಯ ಮಾಡಿದ್ದಾರೆ. ಹಾಗಾಗಿ ನಾನು ಅನಿವಾರ್ಯವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದರು.ನನಗೆ ಅಳು ಬರುವ ಪರಿಸ್ಥಿತಿ ಬಂದಿದೆ. ಬೇರೆ ಪಕ್ಷದಲ್ಲಿದ್ದವರನ್ನು ಕರೆದುಕೊಂಡು ಬಂದು ನಮಗೆ ನೋವು ಕೊಡುತ್ತಿದ್ದಾರೆ. ಯಾರೋ ಮೌಲಾನಾ ಹೇಳಿದರು ಎನ್ನುತ್ತಾರೆ. ಆದರೆ ಯಾವ ಮೌಲಾನಾ ಕೂಡ ನನ್ನ ವಿರುದ್ದ ಹೇಳಿಲ್ಲ. ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಎಲ್ಲರೂ ಒಂದಾಗಿದ್ದೇವೆ ಎಂದರು. ಅಲ್ಲದೇ ಈ ಬಾರಿ ನನ್ನ ಗೆಲುವನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.