Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಮಂಗಳವಾರದಿಂದ ಪುನಃ ಮುಂದುವರಿಯಲಿದೆ.
ಸದ್ಯ ಅಧಿಕಾರಿಗಳು ಸರ್ಕಾರಿ ರಜೆ ಎಂದು ವಿರಾಮ ನೀಡಿದ್ದು, ಬಿಡಿಎ ಬೀಗದ ಕೀ ಎಸಿಬಿ ಅಧಿಕಾರಿಗಳ ಅವರ ಬಳಿಯೇ ಇದೆ. ನ. 25ರ ವರೆಗೆ ಸರ್ಚ್ ವಾರೆಂಟ್ ಹೊಂದಿರುವ ಎಸಿಬಿ, ಅವಶ್ಯಕತೆ ಇದ್ದರೆ ಮತ್ತೆ ಸರ್ಚ್ ವಾರೆಂಟ್ ಹೆಚ್ಚುವರಿ ದಿನ ನೀಡುವಂತೆ ಕೋರ್ಟ್ಗೆ ಮನವಿ ಮಾಡಲಿದ್ದಾರೆ.
ಮೂವರು ಎಸ್ಪಿಗಳ ನೇತೃತ್ವದಲ್ಲಿ ನಡೆಯುತ್ತಿರುವ ದಾಳಿ ಮಂಗಳವಾರ ಬೆಳಿಗ್ಗೆಯಿಂದ ಮತ್ತೆ ಮುಂದುವರೆಯಲಿದೆ.
ಬಿಡಿಎ ಅಧಿಕಾರಿಗಳಿಂದ ವಿವಿಧ ಮಾದರಿಯಲ್ಲಿ ಜನರಿಗೆ ಹಾಗೂ ಸರ್ಕಾರಕ್ಕೆ ವಂಚನೆಯಾಗಿದೆ. ಬ್ರೋಕರ್ಗಳ ಮೂಲಕ ಹಣ ಪಡೆದು ವಂಚಿಸಿದ್ದಾರೆ. ಈ 2000ನೇ ಇಸವಿ ಹಾಗೂ ಅದಕ್ಕಿಂತ ಹಿಂದೆ ಮಾರಿದ್ದ ಸೈಟ್ಗಳನ್ನು ಮತ್ತೆ ಮತ್ತೆ ಮಾರಾಟ ಮಾಡಿದ್ದಾರೆ. ಪ್ರೈಮ್ ಏರಿಯಾದಲ್ಲಿ ನೀಡಬೇಕಿರುವ ಸೈಟ್ ಬೇರೆಯವರಿಗೆ ನೀಡಿ ಅದಕ್ಕೆ ಪ್ರತಿಯಾಗಿ ಬೇರೆಡೆ ಸೈಟ್ ನೀಡಲಾಗಿದೆ. ಅರ್ಹತೆ ಇಲ್ಲದವರಿಗೂ ಸೈಟ್ ನೀಡಲಾಗಿದೆ. ಭೂ ಸ್ವಾಧೀನ ಪಡೆಯುವಾಗಲೂ ಅಕ್ರಮ ಎಸೆದಿದ್ದಾರೆ. ಹೀಗೆ ಹಣ ಮಾಡುವ ಉದ್ದೇಶಕ್ಕೆ ಸರ್ಕಾರಕ್ಕೆ ಮತ್ತು ಜನರಿಗೆ ವಂಚಿಸಿರುವ ಬಗ್ಗೆ ದಾಖಲಾತಿ ಎಸಿಬಿಗೆ ಲಭ್ಯವಾಗಿದೆ.
ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಹಳೆ ದಾಖಲಾತಿಗಳನ್ನು ಕೆದಕುತ್ತಿದ್ದಾರೆ. 2020, 2019, 2018, 2017 ರ ವರೆಗಿನ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಒಂದೊಂದು ಫೈಲ್ಗೂ ಒಂದೊಂದು ಎಫ್ಐಆರ್ ದಾಖಲಿಸಲು ಎಸಿಬಿ ತೀರ್ಮಾನಿಸಿದೆ. ಪ್ರತಿಯೊಂದು ಪ್ರಕರಣ ಅತಿ ಮುಖ್ಯ. ಅಂದಾಜಿನ ಪ್ರಕಾರ ನಲವತ್ತರಿಂದ ಐವತ್ತಕ್ಕೂ ಹೆಚ್ಚು ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ ಎಂದು ಎಂದು ಎಸಿಬಿ ಮೂಲಗಳು ತಿಳಿಸಿವೆ.
ಬಿಡಿಎ ವಿರುದ್ಧ 30ಕ್ಕೂ ಅಧಿಕ ದೂರುಗಳು:
ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೆ ಬಿಡಿಎ ವಿರುದ್ಧ ಸಾಲು ಸಾಲು ದೂರುಗಳು ಬರುತ್ತಿವೆ. ಬಿಡಿಎನಿಂದ ವಂಚಿತರಾದ ಉದ್ಯಮಿಗಳು, ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ದಾಖಲೆಗಳ ಸಹಿತ ವಂಚಿತರಾವರು ದೂರು ನೀಡುತ್ತಿದ್ದಾರೆ. ಇದುವರೆಗೆ ಸುಮಾರು ಮೂವತ್ತಕ್ಕು ಹೆಚ್ಚು ದೂರು ಬಂದಿವೆ ಎಂದು ಮೂಲಗಳು ತಿಳಿಸಿವೆ.