Publish Date: Fri, 23 Nov 2018 (16:20 IST)
Updated Date: Fri, 23 Nov 2018 (16:23 IST)
ಮದ್ಯಪಾನ, ಮೋಜು ಮಸ್ತಿಗಾಗಿ ಅಪಹರಣ ಹಾಗೂ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ನ ಸದಸ್ಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈಚೆಗೆ ಕ್ಯಾಬ್ ಚಾಲಕನನ್ನು ಅಪಹರಿಸಿದ್ದ ಡೆಂಕಣಿಕೋಟೆ ಗ್ಯಾಂಗ್ ನವರು 50 ಸಾವಿರ ರೂ.ಗಳ ಸುಲಿಗೆ ಮಾಡಿದ್ದರು. ಈ ಪ್ರಕರಣ ಬೆನ್ನು ಹತ್ತಿ ತನಿಖೆ ಆರಂಭಿಸಿ ಐವರು ತಮಿಳುನಾಡಿನ ಡೆಂಕಣಿಕೋಟೆಯ ಅಪಹರಣಕಾರರ ಗ್ಯಾಂಗ್ನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವೀವರ್ಸ ಕಾಲೋನಿಯ ಕೃಷ್ಣನಾಯಕ್ ಅಲಿಯಾಸ್ ಕಳ್ಳಕೃಷ್ಣ (24), ಯಶ್ವಂತ್ ಕುಮಾರ್ ಅಲಿಯಾಸ್ ಕೋತಿ (23), ರಮೇಶ್ ಅಳಿಯಾಸ್ ಸ್ವಾಮಿ (20), ಶಶಿಕುಮಾರ್ ಅಲಿಯಾಸ್ ಶಶಿ (22), ಅರುಣ್ ಕುಮಾರ್ ಅಲಿಯಾಸ್ ಕೊಂಗ (20) ಬಂಧಿತ ಗ್ಯಾಂಗ್ನ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಬಂಧಿತರಿಂದ ನಗದು ಸೇರಿ, 3 ಲಕ್ಷ 63 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹರಿಬಾಬು ಎಂಬುವರು ಅವರ ಅಣ್ಣನ ಟಾಟಾ ಇಂಡಿಕಾ ಕಾರನ್ನು ಖಾಸಗಿ ಕಂಪನಿಯೊಂದರ ಉದ್ಯೋಗಿಗಳನ್ನು ಕರೆದುಕೊಂಡು ಬಿಡುವ ಕೆಲಸ ಮಾಡುತ್ತಿದ್ದ.
ಕಂಪನಿಯ ಉದ್ಯೋಗಿಗಳನ್ನು ಮನೆಗೆ ಬಿಟ್ಟು ಮನೆಗೆ ಬರುತ್ತಿದ್ದಾಗ ಅಡ್ಡಗಟ್ಟಿದ ಬಂಧಿತ ಗ್ಯಾಂಗ್, ಕಾರಿನ ಜತೆ ಹರಿಬಾಬುನನ್ನು ಅಪಹರಿಸಿಕೊಂಡು ಪರಾರಿಯಾಗಿತ್ತು.
ಮೊದಲಿಗೆ ಹರಿಬಾಬುನ ಅಣ್ಣ ಅಶೋಕ್ಗೆ ಕರೆ ಮಾಡಿ 50 ಸಾವಿರ ರೂ.ಗಳನ್ನು ಬ್ಯಾಂಕಿನ ಅಕೌಂಟ್ಗೆ ಹಾಕುವಂತೆ ಹೇಳಿ ಅದನ್ನು ತೆಗೆದುಕೊಂಡಿದ್ದ ಆರೋಪಿಗಳು, ಆನೇಕಲ್, ಕೊಳ್ಳೆಗಾಲ ಇನ್ನಿತರ ಕಡೆ ಸುತ್ತಾಡಿಸುತ್ತ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ರಾಜೇಶ್ ಮತ್ತವರ ತಂಡ ಗ್ಯಾಂಗ್ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.