Publish Date: Sat, 06 Aug 2022 (14:53 IST)
Updated Date: Sat, 06 Aug 2022 (15:02 IST)
ಬೆಳಗಾವಿಯ ಜಿಲ್ಲಾಧಿಕಾರಿ ಅಧಿಕೃತ ನಿವಾಸದ ಹಿಂದಿರುವ ಕ್ವಾರ್ಟರ್ಸ್ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ. ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ವಿಶ್ವೇಶ್ವರಯ್ಯ ನಗರದಲ್ಲಿ ನಿನ್ನೆ (ಆ.5) ಸಂಜೆ ಚಿರತೆ ಕಾಣಿಸಿಕೊಂಡಿತು. ಅಲ್ಲದೆ, ಜಾಧವ್ ನಗರದಲ್ಲೂ ಪ್ರತ್ಯಕ್ಷವಾದ್ದರಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಎರಡೂ ಕಡೆ ಬೋನು ಅಳವಡಿಸಿದೆ. ಇದರ ಜೊತೆಗೆ ಮನೆಯಿಂದ ಯಾರು ಹೊರ ಬರದಂತೆ ಮೈಕ್ ನಲ್ಲಿ ಪೊಲೀಸರು ಘೋಷಣೆ ಕೂಗಿದ್ದಾರೆ.
ನಿನ್ನೆ ಮಧ್ಯಾಹ್ನ ಕಾಣಿಸಿಕೊಂಡ ಸ್ಥಳದಿಂದ ಒಂದು ಕಿಮೀ ದೂರದಲ್ಲಿ ಮತ್ತೆ ಸಂಜೆ ಚಿರತೆ ಕಾಣಿಸಿಕೊಂಡಿದ್ದು, ಇದೀಗ ಎರಡು ಏರಿಯಾದ ಜನರಲ್ಲಿ ಆತಂಕ ಹುಟ್ಟಿಕೊಂಡಿದೆ. ಜಾಧವ್ ನಗರ, ಕ್ಯಾಂಪ್ ಪ್ರದೇಶ, ವಿಶ್ವೇಶ್ವರಯ್ಯ ನಗರ ಹಾಗೂ ಹನುಮಾನ್ ನಗರದ ಜನ ಹೊರ ಬಾರದಂತೆ ಎಚ್ಚರಿಕೆ ನೀಡಲಾಗಿದೆ.
ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಯಾರು ಓಡಾಡದಂತೆ ನಗರ ಪೊಲೀಸ್ ಆಯುಕ್ತರಾದ ಡಾ.ಬೋರಲಿಂಗಯ್ಯ ಪ್ರಕಟಣೆ ಹೊರಡಿಸಿದ್ದಾರೆ. ಬೆಳಗಿನ ಜಾವ ವಾಯು ವಿಹಾರ ಮಾಡಬಾರದು ಅಂತಾನೂ ಸೂಚನೆ ನೀಡಿದ್ದಾರೆ.