Publish Date: Thu, 23 Mar 2023 (14:01 IST)
Updated Date: Thu, 23 Mar 2023 (14:03 IST)
ಬೆಂಗಳೂರು : ಕ್ಷುಲ್ಲಕ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿದ್ದ ದಂಪತಿಯನ್ನು ಠಾಣೆಗೆ ಕರೆಸಿ ರಾಜಿ ಮಾಡಿಸಿದ ಪ್ರಸಂಗ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹೆಚ್ಚಿನ ಸಮಯ ಫೋನಿನಲ್ಲಿ ಮಾತನಾಡುವುದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿಕೊಂಡು ಪತ್ನಿ ಮನೆ ಬಿಟ್ಟಿದ್ದಾಳೆ. ಆಕೆಯನ್ನು ಪತ್ತೆಮಾಡಿ ಪತಿಗೆ ಒಪ್ಪಿಸಿದ ಎರಡೇ ದಿನದಲ್ಲಿ ಪತಿ ನಾಪತ್ತೆಯಾಗಿದ್ದಾನೆ. ಕೊನೆಗೆ ಇಬ್ಬರನ್ನೂ ಠಾಣೆಗೆ ಕರೆಸಿ ಪೊಲೀಸರು ರಾಜಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಶೋಕ್ (30) ಎಂಬುವವರ ಪತ್ನಿ, ನಾನು ಮತ್ತೆ ಬರುವುದಿಲ್ಲ. ತಾಳ್ಮೆ ಕಳೆದುಕೊಂಡಿದ್ದೇನೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮೆಸೇಜ್ ಕಳುಹಿಸಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಮಾರನೇ ದಿನ ಮಾ.10 ರಂದು ಅಶೋಕ್ ಕೋಣನಕುಂಟೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದ. ನಂತರ ಮಾ.12 ರಂದು ಉತ್ತರ ಕನ್ನಡದ ಶಿರಸಿಯ ಸ್ನೇಹಿತರ ಮನೆಯಲ್ಲಿರುವುದನ್ನು ಪೊಲೀಸರು ಪತ್ತೆಹಚ್ಚಿ ಗಂಡನೊಂದಿಗೆ ಕಳುಹಿಸಿದ್ದರು.
ಇದಾದ ಎರಡು ದಿನಗಳ ಬಳಿಕ ಪತಿ ನಾಪತ್ತೆಯಾಗಿದ್ದು ಪತ್ನಿ ಸುಕನ್ಯಾಬಾಯಿ (25) ಮಾ.14 ರಂದು ಪೊಲೀಸ್ ಠಾಣೆಗೆ ಬಂದು ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಳು.