Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು:- ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನೂರು ಎಕರೆ ವಿಸ್ತಾರದಲ್ಲಿ ತಲೆ ಎತ್ತಲಿದೆ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸುತ್ತಾರೆ.
ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಈ ವಿವಿ ಕ್ಯಾಂಪಸ್ ಸ್ಥಾಪನೆಯಾಗಲಿದೆ. ವೇದ, ವಿಜ್ಞಾನ, ಗಣಿತ ಹಾಗೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಸ್ಕೃತ ಭಾಷೆಯ ಕೊಡುಗೆ ಅನನ್ಯ. ಇದರ ಕುರಿತು ಜಗತ್ತಿನ ವಿವಿಧ ಮೂಲೆಗಳಿಂದ ಅಧ್ಯಯನ ಮಾಡಲು ಭಾರತಕ್ಕೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಜೊತೆಗೆ ಆಧುನಿಕ ಶಿಕ್ಷಣ ಪಡೆಯುವಂತಹ ಕೇಂದ್ರಗಳನ್ನು ಇದೇ ವಿವಿಯ ಅಡಿಯಲ್ಲಿ ಪ್ರಾರಂಭಿಸಲಾಗುತ್ತಿದೆ.
ಹತ್ತು ವರ್ಷಗಳ ಹಿಂದೆ ಸಂಸ್ಕೃತ ವಿವಿಗೆ ಇಲ್ಲಿ 100 ಎಕರೆ ಜಾಗ ಮಂಜೂರಾಗಿದ್ದರೂ ತಾಂತ್ರಿಕ ಕಾರಣಗಳಿಂದ ಜಾಗ ಹಸ್ತಾಂತರ ವಿಳಂಬವಾಗಿತ್ತು. ಇದೀಗ ಇಲ್ಲಿ 320 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್ ನಿರ್ಮಾಣವಾಗಲಿದೆ. ತರ್ಕ, ವಿಮರ್ಶೆ, ಅರ್ಥಶಾಸ್ತ್ರ, ಕಂಪ್ಯೂಟರ್, ಯೋಗ, ಆಯುರ್ವೇದ ವೈದ್ಯ ತರಬೇತಿ, ದೇಶಿ ಗಿಡಮೂಲಿಕೆಗಳ ವನ ಹಾಗೂ ವೇದಗಣಿತ, ಶಿಕ್ಷಕ ತರಬೇತಿ ಕೇಂದ್ರಗಳು, ಬೃಹತ್ ಗ್ರಂಥಾಲಯ ನಿರ್ಮಾಣವೂ ಸೇರಿದಂತೆ ಅನೇಕ ಯೋಜನೆಗಳು ಬರಲಿವೆ.