Publish Date: Wed, 04 Mar 2026 (10:59 IST)
Updated Date: Wed, 04 Mar 2026 (11:02 IST)
ಡಾ ರಾಜ್ ಕುಮಾರ್ ಹಲವು ವಿಚಾರಗಳಲ್ಲಿ ಆದರ್ಶಪ್ರಾಯರು. ಈ ಒಂದು ವಿಚಾರದಲ್ಲಿ ಮಲಯಾಳಂ ಸೂಪರ್ ಸ್ಟಾರ್, ದಾದಾ ಸಾಹೇಬ್ ಪುರಸ್ಕೃತ ಮೋಹನ್ ಲಾಲ್ ಕೂಡಾ ಅದೇ ಪಾಲಿಸಿ ಹೊಂದಿದ್ದಾರಂತೆ.
ಕೇವಲ ಕಲಾವಿದರು ಅಂತಲ್ಲ ವರನಟ ಡಾ ರಾಜ್ ಕುಮಾರ್ ಇಂದಿನವರಿಗೂ ಅನೇಕ ವಿಚಾರದಲ್ಲಿ ಸ್ಪೂರ್ತಿ. ಅನ್ನದ ವಿಚಾರದಲ್ಲಿ ಅಣ್ಣಾವ್ರು ತುಂಬಾ ಕಟ್ಟುನಿಟ್ಟು. ಊಟವನ್ನು ಮಾಡುವಾಗ ಅಣ್ಣಾವ್ರು ಅದನ್ನು ತುಂಬಾ ಇಷ್ಟಪಟ್ಟು ಗೌರವದಿಂದ ಊಟ ಮಾಡುತ್ತಿದ್ದರು. ಒಂದು ಅಗುಳನ್ನೂ ಅವರು ವೇಸ್ಟ್ ಮಾಡುತ್ತಿರಲಿಲ್ಲ ಎಂದು ಬಲ್ಲವರು ಹೇಳುತ್ತಾರೆ.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡಾ ಈ ವಿಚಾರದಲ್ಲಿ ಅಣ್ಣಾವ್ರನ್ನು ಹೋಲುತ್ತಾರಂತೆ. ಇದರ ಬಗ್ಗೆ ಸಂದರ್ಶನವೊಂದರಲ್ಲಿ ಮಲಯಾಳಂ ನಟ ಮನೋಜ್ ಕೆ ಜಯನ್ ಒಮ್ಮೆ ಹೇಳಿಕೊಂಡಿದ್ದರು. ಅನ್ನಕ್ಕೆ ತುಂಬಾ ಗೌರವ ಕೊಡುವ ವ್ಯಕ್ತಿ ಮೋಹನ್ ಲಾಲ್.
ಒಮ್ಮೆ ನಾನು ಅವರ ಜೊತೆಗೆ ಕೂತು ಊಟ ಮಾಡುತ್ತಿದ್ದೆ. ನನಗೆ ಸೆಟ್ ನಲ್ಲಿ ಕೊಟ್ಟಿದ್ದ ಇಡ್ಲಿ ಚಟ್ನಿ ಸ್ವಲ್ಪ ಹಳಸಿದಂತೆ ಆಗಿತ್ತು. ನಾನು ಅಯ್ಯೋ ಚೆನ್ನಾಗಿಲ್ಲ ಎಂದು ಇಡ್ಲಿಯನ್ನು ಕಲಸಿ ತಿನ್ನಲು ಹಿಂದೆ ಮುಂದೆ ನೋಡುತ್ತಿದ್ದೆ. ಅದನ್ನು ನೋಡಿ ನನಗೆ ಏನಾಯ್ತು ಎಂದು ಕೇಳಿದರು. ನಾನು ಇಡ್ಲಿ ಹಾಳಾಗಿದ್ದ ವಿಷಯ ಹೇಳಿದೆ. ಸಾಂಬಾರ್ ಹಾಕಿ ತಿನ್ನು ಎಂದರು. ನನಗೆ ಸಾಂಬಾರ್ ಹಾಕಿ ತಿನ್ನಲು ಅಷ್ಟು ಇಷ್ಟವಾಗಲ್ಲ ಎಂದು ಹೇಳಿ ಬಿಸಾಕಲು ಹೊರಟೆ. ಆಗ ಮೋಹನ್ ಲಾಲ್ ಆ ಊಟವನ್ನು ನನಗೆ ಕೊಡು ಎಂದು ಹೇಳಿ ನಾನು ಕಲಸಿಟ್ಟಿದ್ದ ಇಡ್ಲಿಯನ್ನು ತಾವು ತಿಂದರು. ನನಗೆ ನಿಜಕ್ಕೂ ಅವಾಕ್ಕಾಗಿತ್ತು. ಒಬ್ಬ ಸೂಪರ್ ಸ್ಟಾರ್ ನಟ ನಾನು ಕಲಸಿಟ್ಟ ತಿಂಡಿಯನ್ನು ಒಂದೂ ಬಿಡದೇ ತಿಂದರು ಎಂದರೆ ಸಾಮಾನ್ಯವಾ? ಆದರೆ ಮೋಹನ್ ಲಾಲ್ ಊಟ ಬೇಡ ಎಂದರೆ ಮೊದಲೇ ಹೇಳಬೇಕು. ಊಟ ವೇಸ್ಟ್ ಮಾಡಬಾರದು ಎಂದು ತಿಂದರು. ಅಂದು ಎಂದು ಮಾತ್ರವಲ್ಲ, ಅವರು ಯಾರೇ ಊಟ ಕೊಟ್ಟರೂ ಗೌರವದಿಂದ ವೇಸ್ಟ್ ಮಾಡದೇ ತಿನ್ನುತ್ತಾರೆ. ರುಚಿ ಅವರಿಗೆ ಪ್ರಶ್ನೆಯೇ ಅಲ್ಲ. ಅವರು ಊಟ ಮಾಡಿದ ಬಟ್ಟಲು ನೋಡಿದರೆ ಅದರಲ್ಲಿ ಎರಡು ಕರಿಬೇವು ಬಾಕಿಯಿದ್ದರೂ ಅದೂ ಕೂಡಾ ನೀಟ್ ಆಗಿ ಜೋಡಿಸಿರುತ್ತಾರೆ ಎಂದಿದ್ದಾರೆ.