Publish Date: Tue, 26 Mar 2019 (09:13 IST)
Updated Date: Tue, 26 Mar 2019 (09:14 IST)
ಬೆಂಗಳೂರು: ಮಂಡ್ಯದಲ್ಲಿ ಸ್ಯಾಂಡಲ್ ವುಡ್ ನ ಇಬ್ಬರು ಸ್ಟಾರ್ ಗಳ ನಡುವೆ ಚುನಾವಣಾ ಕಣ ರಂಗೇರಿದೆ. ಇಂತಹಾ ಹೊತ್ತಿನಲ್ಲಿ ಇತ್ತೀಚೆಗೆ ನೀವು ಯಾರ ಪರ ಪ್ರಚಾರ ಮಾಡುತ್ತೀರಿ ಎಂದು ಸ್ಯಾಂಡಲ್ ವುಡ್ ತಾರೆಯರಿಗೆ ಇತ್ತೀಚೆಗೆ ಪ್ರಶ್ನೆಗಳು ಎದುರಾಗುವುದು ಸಾಮಾನ್ಯ.
ಈಗಾಗಲೇ ದರ್ಶನ್, ಯಶ್ ಸುಮಲತಾ ಪರ ನಿಂತಿದ್ದಾರೆ. ಪುನೀತ್ ರಾಜ್ ಕುಮಾರ್ ರಾಜಕೀಯಕ್ಕೂ ನನಗೂ ಆಗಿಬರಲ್ಲ ಎಂದಿದ್ದಾರೆ. ಆದರೆ ಶಿವರಾಜ್ ಕುಮಾರ್ ಗೆ ಇದೇ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರ ವಿವಾದಕ್ಕೆ ಕಾರಣವಾಗಿದೆ.
ನಾನು ಯಾರ ಪರವಾಗಿಯೂ ಪ್ರಚಾರ ಮಾಡಲ್ಲ. ಯಾರೂ ನನ್ನನ್ನು ಕರೆದೂ ಇಲ್ಲ. ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿವಂತಿಕೆ ಬೇಕು. ನಾನು ಅಷ್ಟೊಂದು ಬುದ್ಧಿವಂತ ಅಲ್ಲ. ನನಗೆ ರಾಜಕೀಯ ಬೇಡ. ಹಿಂದೆ ನನ್ನ ಪತ್ನಿ ಸ್ಪರ್ಧಿಸಿದ್ದಾಳೆಂದು ಒಮ್ಮೆ ಮಾತ್ರ ಚುನಾವಣಾ ಪ್ರಚಾರಕ್ಕೆ ಹೋಗಿದ್ದೆ. ಆದರೆ ಈಗ ಶಿವಮೊಗ್ಗದಲ್ಲಿ ಮಧು ಪರ ನನ್ನ ಪತ್ನಿ ಗೀತಾ ಪ್ರಚಾರಕ್ಕೆ ಹೋಗಬಹುದು. ಆದರೆ ನಾನು ಹೋಗಬೇಕು ಅಂತ ಅವರೂ ನಿರೀಕ್ಷೆ ಮಾಡಲ್ಲ, ನಾನು ಹೋಗಲ್ಲ. ಜನರಿಗೆ ಬೇಕಾದ ಅಭ್ಯರ್ಥಿಯನ್ನು ಗೆಲ್ಲಿಸಲಿ ಎಂದು ಶಿವಣ್ಣ ಹೇಳಿದ್ದರು.
ಆದರೆ ಶಿವಣ್ಣ ಹೇಳಿಕೆಗೆ ಬೇರೆಯೇ ಅರ್ಥ ಕಲ್ಪಿಸಿ ಕೆಲವು ಮಾದ್ಯಮಗಳಲ್ಲಿ ವರದಿಯಾದವು. ಇದು ವಿವಾದಕ್ಕೆ ಕಾರಣವಾಯಿತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಭಿಮಾನಿಗಳು ಶಿವಣ್ಣ ಪರವಾಗಿ ಮಾತನಾಡಿದ್ದು, ಶಿವಣ್ಣ ಹೋಗುತ್ತಿರುವ ದಾರಿ ಸರಿಯಾಗಿದೆ ಎಂದು ಬೆಂಬಲ ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ