Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಒಂದಾದ ಮೇಲೊಂದರಂತೆ ಕಂಟಕಗಳು ಎದುರಾಗುತ್ತಿವೆ. ಅವರೇ ನಿನ್ನೆ ಮಾಧ್ಯಮಗಳ ಮುಂದೆ ಆಕ್ರೋಶದಲ್ಲಿ ಮಾತನಾಡುವಾಗ ನೀಡಿದ ಹೇಳಿಕೆಯೊಂದು ಈಗ ನಿರ್ದೇಶಕ ಪ್ರೇಮ್ ಕೆಂಗಣ್ಣಿಗೆ ಗುರಿಯಾಗಿದೆ.
ಉಮಾಪತಿಯವರನ್ನು ಪರಿಚಯ ಮಾಡಿದ್ದು ಪ್ರೇಮ್. ಯಾವುದೇ ನಿರ್ಮಾಪಕರಿಗೆ ನಾನು 70 ದಿನ ಕಾಲ್ ಶೀಟ್ ಕೊಡುತ್ತೇನಷ್ಟೇ. ಆದರೆ ಮರುದಿನ ಪ್ರೇಮ್ ಗೋಸ್ಕರ್ ನಿರ್ಧಾರ ಬದಲಿಸಿ 100 ದಿನ ಕಾಲ್ ಶೀಟ್ ಕೊಟ್ಟರು ಎಂಬ ಸುದ್ದಿ ಬಂತು. ಪ್ರೇಮ್, ಉಮಾಪತಿ ಇಬ್ಬರನ್ನೂ ಈ ಬಗ್ಗೆ ಕೇಳಿದೆ. ಇಬ್ಬರೂ ನಾವು ಹೇಳಿಲ್ಲ ಎಂದರು. ನಾನು ಈ ಚಿತ್ರ ಮಾಡಲ್ಲ ಎಂದೆ. ಪ್ರೇಮ್ ಏನು ದೊಡ್ಡ ಪುಡುಂಗಾ? ಕೊಂಬೈತಾ? ಎಂದು ದರ್ಶನ್ ಬೈದಿದ್ದರು.
ಇದು ಪ್ರೇಮ್ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕಿದ ಅವರು, ಕರಿಯ ಸಿನಿಮಾ ಮಾಡಬೇಕಾದರೆ ನಾನು ಯಾವುದೇ ಪುಡುಂಗನೂ ಅಲ್ಲ, ಕೊಂಬೂ ಇರ್ಲಿಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜ್ ಕುಮಾರ್, ರಜನೀಕಾಂತ್, ವಿಷ್ಣುವರ್ಧನ್, ಅಂಬರೀಶ್ ಅಂತಹವರೇ ನನ್ನ ಬೆನ್ನು ತಟ್ಟಿದ್ದಾರೆ. ಇಡೀ ಕರ್ನಾಟಕ ಜನತೆ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಎಂದು ಬಿರುದು ಕೊಟ್ಟಾಗಲೂ ನನಗೆ ಕೊಂಬು ಇರ್ಲಿಲ್ಲ. ಉಮಾಪತಿಯವರು ನೀವು ದರ್ಶನ್ ಸೇರಿ ನಂಗೆ ಸಿನಿಮಾ ಮಾಡ್ಕೊಡಿ ಅಂತ ಅಂದಿದ್ರು. ಅದಕ್ಕೆ ನಾನು ಅವರನ್ನು ನಿಮಗೆ ಪರಿಚಯ ಮಾಡಿದೆ. ಆದರೆ ನನ ದಿ ವಿಲನ್ ಸಿನಿಮಾ ಲೇಟ್ ಆಗಿದ್ದರಿಂದ ಬೇರೆ ನಿರ್ದೇಶಕರೊಂದಿಗೆ ಸಿನಿಮಾ ಮಾಡಿ ಎಂದಿದ್ದೆ. ನನ್ನ ಸಂಭಾವನೆಯನ್ನು ವಾಪಸ್ ಮಾಡಿ ನೀವು ಉಮಾಪತಿ ಜೊತೆಗೆ ರಾಬರ್ಟ್ ಮಾಡುವಾಗ ಶುಭ ಹಾರೈಸಿದವನು ನಾನು. ಇದರ ಮಧ್ಯೆ ನನ್ನ ಹೆಸರು ಯಾಕೆ?
ದರ್ಶನ್ ಅವ್ರೇ ನಿರ್ದೇಶಕರು ಯಾವ ಪುಡಂಗಿಗಳೂ ಅಲ್ಲ, ಕೊಂಬೂ ಇರಲ್ಲ. ತೆರೆ ಮೇಲೆ ಒಬ್ಬ ನಟನನ್ನು ಹುಟ್ಟು ಹಾಕಿ ಅವನಿಗೆ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆ ಅಂತ ಪ್ರತಿಯೊಬ್ಬ ಕಲಾವಿದನಿಗೂ, ನಿಮಗೂ ಗೊತ್ತು. ದಯವಿಟ್ಟು ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಿ ದರ್ಶನ್ ಅವರೇ. ಥ್ಯಾಂಕ್ಯೂ ಫಾರ್ ಯುವರ್ ಕೈಂಡ್ ವರ್ಡ್ಸ್. ದೇವರು ನಿಮಗೆ ಒಳ್ಳೆದು ಮಾಡ್ಲಿ ಎಂದು ಪ್ರೇಮ್ ಸುದೀರ್ಘವಾಗಿ ಬರೆದುಕೊಂಡು ತಿರುಗೇಟು ಕೊಟ್ಟಿದ್ದಾರೆ. ಪ್ರೇಮ್ ರ ಈ ಪೋಸ್ಟ್ ಗೆ ನೆಟ್ಟಿಗರಿಂದ ಬೆಂಬಲ ವ್ಯಕ್ತವಾಗಿದೆ.