Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ಗಿಂತ ಮೊದಲು ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ನಟ-ನಟಿಯರು ಈಗ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತಾಗಿದೆ.
ಇನ್ನೇನು ಚಿತ್ರರಂಗದಲ್ಲಿ ಭರವಸೆ ಮೂಡಿಸಿ, ಹೊಸ ಅವಕಾಶಗಳನ್ನು ಪಡೆಯುವ ಹೊಸ್ತಿಲಲ್ಲಿ ಕೊರೋನಾ ವಕ್ಕರಿಸಿತು. ಅದಾದ ಬಳಿಕ ಸಿನಿಮಾಗಳು ಸೆಟ್ಟೇರುತ್ತಿಲ್ಲ. ಚಿತ್ರೀಕರಣವಾದರೂ ಬಿಡುಗಡೆಯಾಗುತ್ತಿಲ್ಲ. ಇದರಿಂದಾಗಿ ಎಷ್ಟೋ ನಟರು ಅವಕಾಶ ಕಳೆದುಕೊಳ್ಳುವಂತಾಗಿದೆ.
ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ ನಟರ ಪೈಕಿ ನಂ.1 ಸ್ಥಾನದಲ್ಲಿದ್ದರು. ಆದರೆ ಇದೀಗ ಪೃಥ್ವಿ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಕಾದು ಕುಳಿತಿವೆ. ಇನ್ನು, ಲಾಕ್ ಡೌನ್ ಮುಕ್ತವಾದ ಬಳಿಕವೂ ಅದೇ ಸ್ಟಾರ್ ವಾಲ್ಯೂ ಉಳಿಸಿಕೊಳ್ಳುತ್ತಾರಾ ಕಾದು ನೋಡಬೇಕು. ಇದೇ ಸಿನಿಮಾದಲ್ಲಿ ಅಭಿನಯಿಸಿದ್ದ ದೀಕ್ಷಿತ್ ಶೆಟ್ಟಿಯದ್ದೂ ಇದೇ ಕತೆ. ಆ ಪೈಕಿ ಧನ್ವೀರ್ ಗೌಡ ಇನ್ನೂ ತಮ್ಮದೇ ಚಾರ್ಮ್ ಉಳಿಸಿಕೊಂಡಿದ್ದಾರೆ.
ಇನ್ನು, ಈ ವಿಚಾರದಲ್ಲಿ ಹೀರೋಯಿನ್ ಗಳೇ ಲಕ್ಕಿ. ಅವರು ನಟರಷ್ಟು ಬೇಗನೇ ಮಾರುಕಟ್ಟೆ ಕಳೆದುಕೊಳ್ಳಲ್ಲ. ಲಾಕ್ ಡೌನ್ ಗಿಂತ ಮೊದಲು ಅನೇಕ ಕಿರುತೆರೆ ನಟಿಯರೂ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿದ್ದರು. ಮೇಘಾ ಶೆಟ್ಟಿ, ಮೋಕ್ಷಿತಾ, ಭವ್ಯಾ ಗೌಡ ಇತ್ಯಾದಿ ನಟಿಯರ ಸಿನಿಮಾಗಳು ಈಗಾಗಲೇ ಅನೌನ್ಸ್ ಆಗಿವೆ. ಇವರೆಲ್ಲರ ಚಿತ್ರರಂಗದ ಮುಂದಿನ ಭವಿಷ್ಯದ ಮೇಲೆ ಲಾಕ್ ಡೌನ್ ಸಾಕಷ್ಟು ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು.