Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಇತ್ತಿಚೆಗೆ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡು ದರ್ಶನ್ ಅವರು ಕರ್ನಾಟಕಕ್ಕೆ ಮರಳಿದ್ದಾರೆ. ಆದರೆ ದರ್ಶನ್ ಅವರು ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ವಿಷಯಕ್ಕೆ ತುಂಬಾ ಬೇಸರಗೊಂಡಿದ್ದಾರೆ.
ಅದೇನೆಂದರೆ ಹೈದರಾಬಾದ್ ನಲ್ಲಿರುವಂತೆ ಕರ್ನಾಟಕದಲ್ಲಿ ದೊಡ್ಡ ಶೂಟಿಂಗ್ ಸ್ಥಳದ ವ್ಯವಸ್ಥೆ ಇಲ್ಲದೆ ಕರ್ನಾಟಕದ ಹೊರಗೆ ಹೋಗಿ ಶೂಟಿಂಗ್ ಮಾಡುವಂತಾಯಿತು ಎಂದು ದರ್ಶನ್ ಅವರು ಟಿವಿ ಸಂದರ್ಶನವೊಂದರಲ್ಲಿ ಬೇಸರದಿಂದ ಹೇಳಿದ್ದಾರೆ. ‘ನಮ್ಮಲ್ಲಿ ಕೆಲವೇ ಕೆಲವು ಸ್ಟುಡಿಯೋಗಳಿದ್ದು, ಅವೆಲ್ಲವನ್ನು ಟಿವಿ ಶೋಗಳು ಆರಿಸಿಕೊಂಡಿವೆ. ಜಾಗವೇ ಇಲ್ಲ.ಅಲ್ಲಿ ದೊಡ್ಡ ದೊಡ್ಡ ಸೆಟ್ ಹಾಕೋದು ಕಷ್ಟ. ಪೌರಾಣಿಕ ಸಿನಿಮಾಗಳನ್ನು ಮಾಡೋದು ಇನ್ನೂ ಕಷ್ಟ. ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಲು ಬೇರೆ ರಾಜ್ಯಕ್ಕೆ ಹೋಗುವುದು ನಿಜಕ್ಕೂ ನೋವಿನ ಸಂಗತಿ. ಕನ್ನಡ ಚಿತ್ರಗಳು ಕೋಟಿ ಕೋಟಿ ವ್ಯವಹಾರ ಮಾಡುತ್ತಿದ್ದರೂ ಒಂದು ವಿಶಾಲವಾದ ಸುಸಜ್ಜಿತ ಸ್ಟುಡಿಯೋವನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ