Publish Date: Tue, 09 Nov 2021 (10:59 IST)
Updated Date: Tue, 09 Nov 2021 (11:01 IST)
'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಇಂದಿಗೆ 12 ದಿನಗಳಾಗಿವೆ. ಸೋಮವಾರ (ನ.8) ಅವರ ಕುಟುಂಬಸ್ಥರು 11ನೇ ದಿನ ಕಾರ್ಯಗಳನ್ನು ಮಾಡಿದ್ದಾರೆ.
ಇನ್ನು, ಅಭಿಮಾನಿಗಳೆಂದರೆ, ಅಪ್ಪುಗೆ ಸಿಕ್ಕಾಪಟ್ಟೆ ಪ್ರೀತಿ. ಡಾ. ರಾಜ್ಕುಮಾರ್ ಕಾಲದಿಂದಲೂ ಅಭಿಮಾನಿಗಳನ್ನು ದೇವರು ಎಂದು ಕರೆದ ಕುಟುಂಬವದು. ಇದೀಗ ಅಪ್ಪು ನಿಧನದ ನಂತರ ಅಸಂಖ್ಯಾತ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ದೊಡ್ಮನೆ ಕುಟುಂಬಸ್ಥರು ಏರ್ಪಡಿಸಿದ್ದಾರೆ. ಇಂದು (ನ.9) ಸುಮಾರು 25 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆಯನ್ನು ಏರ್ಪಾಡು ಮಾಡಲಾಗಿದೆ.
ವೆಜ್ & ನಾನ್ ವೆಜ್ ಊಟ!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಗಾಗಲೇ ಸಕಲ ವ್ಯವಸ್ಥೆ ಮಾಡಲಾಗಿದ್ದು, ಏಕಕಾಲಕ್ಕೆ 5 ಸಾವಿರ ಜನರು ಊಟ ಮಾಡಲು ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸುಮಾರು 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದುವೇಳೆ, ಈ ಸಂಖ್ಯೆ ಇನ್ನೂ ಹೆಚ್ಚಾದರೆ, ಅದಕ್ಕೂ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ವೆಜ್ & ನಾನ್ ವೆಜ್ ಶೈಲಿಯ ಊಟ ಇರಲಿದ್ದು, ಸುಮಾರು 1 ಸಾವಿರ ಬಾಣಸಿಗರು ಸೋಮವಾರದಿಂದಲೇ ಕೆಲಸ ಶುರು ಮಾಡಿದ್ದರು. ಅಡುಗೆಗೆ 1 ಸಾವಿರ ಕೆಜಿ ಸೋನಾ ಮಸೂರಿ ಅಕ್ಕಿ, 750 ಲೀಟರ್ ಎಣ್ಣೆ, ಕೆಜಿಗಟ್ಟಲೇ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಪುದೀನಾ, ಕೊತ್ತಂಬರಿ ಸೊಪ್ಪು ಕಟ್ಟು, ರಾಶಿ ರಾಶಿ ದಿನಸಿಗಳನ್ನು ರಾಜ್ ಕುಟುಂಬವು ಪೂರೈಸಿದೆ. 3 ಸಾವಿರ ಕೆ.ಜಿ. ಚಿಕನ್, 8,500 ಕೋಳಿ ಮೊಟ್ಟೆ ಬಳಸಿ ಅಡುಗೆ ಮಾಡಲಾಗಿದೆ.
ಸಸ್ಯಾಹಾರಿ ಅಡುಗೆಯಲ್ಲಿ ಆಲೂ ಕಬಾಬ್, ಬೇಬಿ ಕಾರ್ನ್, ಘೀ ರೈಸ್-ಕುರ್ಮ, ಅನ್ನ-ರಸಂ, ಅಕ್ಕಿ ಪಾಯಸ, ಮಸಾಲೆ ವಡೆ ಇದೆ. ಇನ್ನು ನಾನ್ ವೆಜ್ ಆಹಾರಪ್ರಿಯರಿಗೆ ಕೋಳಿ ಮೊಟ್ಟೆ, ಚಿಕನ್ ಕಬಾಬ್, ಚಿಕನ್ ಚಾಪ್ಸ್, ಘೀ ರೈಸ್, ಅನ್ನ-ರಸಂ ಇರಲಿದೆ. ಸೌದೆ ಒಲೆಯಲ್ಲಿ ಬಾಣಸಿಗರು ಅರಮನೆ ಮೈದಾನದಲ್ಲಿ ತಯಾರಿಸಿದ್ದಾರೆ. ಈಗಾಗಲೇ ಅಡುಗೆ ತಯಾರಾಗಿದ್ದು,11 ಗಂಟೆಯ ಬಳಿಕ ಅರಮನೆಗೆ ಮೈದಾನಕ್ಕೆ ಬರುವ ಅಭಿಮಾನಿಗಳು, ಗಣ್ಯರಿಗೆ ಊಟ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ದೊಡ್ಮನೆ ಕುಟುಂಬದವರು ಕೂಡ ಈಗಾಗಲೇ ಅರಮನೆ ಮೈದಾನಕ್ಕೆ ಆಗಮಿಸಿದ್ದಾರೆ.