Publish Date: Fri, 29 Mar 2019 (08:36 IST)
Updated Date: Fri, 29 Mar 2019 (08:38 IST)
ಬೆಂಗಳೂರು: ಯಾಕೋ ಈ ಬಾರಿಯೂ ಐಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದುರಾದೃಷ್ಟ ಕಳಚಿ ಬೀಳುವ ಲಕ್ಷಣ ಕಾಣುತ್ತಿಲ್ಲ. ಅದೂ ಸಾಲದ್ದಕ್ಕೆ ನಿನ್ನೆ ನಡೆದ ಪಂದ್ಯದಲ್ಲಿ ಅಂಪಾಯರ್ ಅವಕೃಪೆಯಿಂದ ಕೂದಲೆಳೆಯಲ್ಲಿ ಪಂದ್ಯ ಕಳೆದುಕೊಳ್ಳುವಂತಾಯಿತು.
ಮುಂಬೈ ವಿರುದ್ಧ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನ ಸಮೀಪ ಬಂದಿತ್ತು. ಆದರೆ ಅಂಪಾಯರ್ ಪ್ರಮಾದದಿಂದ 6 ರನ್ ಗಳ ಸೋಲನುಭವಿಸಿತು.
ಗೆಲುವಿಗೆ 185 ರನ್ ಗಳ ಗುರಿ ಬೆನ್ನತ್ತಿದ್ದ ಆರ್ ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲಿಯೇ ಮೊಯಿನ್ ಆಲಿ ರನೌಟ್ ಆದರು. ಆದರೆ ಬಳಿಕ ಮೂರನೇ ವಿಕೆಟ್ ಗೆ ಎಬಿಡಿ ವಿಲಿಯರ್ಸ್ (70) ಮತ್ತು ವಿರಾಟ್ ಕೊಹ್ಲಿ (46) ರನ್ ಗಳಿಸಿ ಚೇತರಿಕೆ ನೀಡಿದರು.
ಅಂತಿಮ ಓವರ್ ನಲ್ಲಿ ಆರ್ ಸಿಬಿಗೆ ಗೆಲ್ಲಲು 17 ರನ್ ಬೇಕಾಗಿತ್ತು. ಮಾಲಿಂಗ ಬೌಲಿಂಗ್ ಮಾಡುತ್ತಿದ್ದರೆ ಶಿವಂ ದುಬೆ ಬ್ಯಾಟ್ಸ್ ಮನ್ ಆಗಿದ್ದರು. ಮೊದಲ ಎಸೆತವನ್ನು ದುಬೆ ಸಿಕ್ಸರ್ ಗೆ ಅಟ್ಟಿದ್ದರು. ಆದರೆ ಮುಂದಿನ ನಾಲ್ಕು ಎಸೆತದಲ್ಲಿ ನಾಲ್ಕು ರನ್ ಮಾಡಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 7 ರನ್ ಬೇಕಾಗಿತ್ತು. ಈ ವೇಳೆ ರನ್ ಗಳಿಸಲು ದುಬೆಗೆ ಸಾಧ್ಯವಾಗಲಿಲ್ಲ. ಮುಂಬೈ ಆಟಗಾರರು ಗೆಲುವಿನ ಸಂಭ್ರಮ ಆಚರಿಸುತ್ತಿದ್ದರು. ಆಗ ರಿಪ್ಲೇನಲ್ಲಿ ಅಂತಿಮ ಎಸೆತ ನೋ ಬಾಲ್ ಆಗಿದ್ದಿದ್ದು, ಸ್ಪಷ್ಟವಾಯಿತು. ಇದನ್ನು ಅಂಪಾಯರ್ ಗಮನಿಸಲಿಲ್ಲ.
ಒಂದು ವೇಳೆ ಅಂಪಾಯರ್ ಗಮನಿಸಿ ನೋ ಬಾಲ್ ಘೋಷಿಸಿದ್ದರೆ ಆರ್ ಸಿಬಿಗೆ ಒಂದು ರನ್ ಮತ್ತು ಎಸೆತವೂ ಸಿಗುತ್ತಿತ್ತು. ಆಗ ಬಹುಶಃ ಗೆಲ್ಲುವ ಅವಕಾಶವಿತ್ತು. ಆದರೆ ಅಂಪಾಯರ್ ಕಳಪೆ ಅಂಪಾಯರಿಂಗ್ ಗೆ ಪಂದ್ಯ ಸೋತಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ