Publish Date: Fri, 10 Jul 2020 (09:37 IST)
Updated Date: Fri, 10 Jul 2020 (09:40 IST)
ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಸಂಘರ್ಷ ನಡೆದ ಹಲವು ದಿನಗಳ ಬಳಿಕ ಇದೀಗ ಭಾರತ ಮತ್ತು ಚೀನಾ ಸೇನೆಗಳು ಗಡಿಯಿಂದ ಹಿಂದೆ ಸರಿಯುವ ಪ್ರಕ್ರಿಯೆ ಪೂರ್ಣಗೊಳಿಸಿವೆ.
ಮೊನ್ನೆಯಷ್ಟೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾ ವಿದೇಶಾಂಗ ಸಚಿವರ ನಡುವೆ ವಿಡಿಯೋ ಕಾಲ್ ಸಂಭಾಷಣೆ ನಡೆದ ಬಳಿಕ ಚೀನಾ ಗಡಿಯಿಂದ ಹಿಂದೆ ಸರಿಯಲು ಒಪ್ಪಿತ್ತು.
ಅದಾದ ಬಳಿಕ ನಿಧಾನವಾಗಿ ಒಂದೊಂದೇ ಭಾಗದಿಂದ ಹೆಚ್ಚುವರಿಯಾಗಿ ನಿಯೋಜಿಸಿದ್ದ ತನ್ನ ಸೇನೆಯನ್ನು ಹಿಂಪಡೆಯಲು ಪ್ರಾರಂಭಿಸಿತ್ತು. ಇದೀಗ ಪ್ರಕ್ರಿಯೆ ಪೂರ್ಣಗೊಂಡಿದ್ದು ಇಂದು ಭಾರತ ಮತ್ತು ಚೀನಾ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಭಾರತದ ಪರ ಅಜಿತ್ ದೋವಲ್ ಮಾತುಕತೆ ನಡೆಸುವ ಸಾಧ್ಯತೆಯಿದೆ.