Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಭಾರತದಲ್ಲಿ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ.
ಆದರೂ ರಾಷ್ಟ್ರ ರಾಜಧಾನಿ ಸೇರಿದಂತೆ ಭಾರತದ ಸಾಕಷ್ಟು ಹಳ್ಳಿಗಳಲ್ಲಿ ಇನ್ನೂ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ.
ಇದರ ಜೊತೆಯಲ್ಲಿ ಅತ್ಯಾಚಾರ ಪ್ರಕರಣವೂ ಭಾರತದಲ್ಲಿ ಕಡಿಮೆಯೇನಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧ ಮಹಿಳೆಯರೂ ಈ ಕ್ರೌರ್ಯಕ್ಕೆ ಬಲಿಯಾಗ್ತಿರುವುದು ನೋವಿನ ಸಂಗತಿ. ಈ ಎರಡರ ಮಧ್ಯೆ ಭಾರತದಲ್ಲಿ ಆಗಿರುವ ಇನ್ನೊಂದು ಸಮಸ್ಯೆ ಹದಿಹರೆಯದ ಸಂಬಂಧ.
ಅರೆ-ಬರೆ ತಿಳಿಯುವ ಹುಡುಗಿಯರು,ಹೈಸ್ಕೂಲ್ ಮೆಟ್ಟಿಲು ಏರುತ್ತಿದ್ದಂತೆ ಪ್ರೀತಿ-ಪ್ರೇಮದ ಗುಂಗಿನಲ್ಲಿ ತೇಲಲು ಶುರು ಮಾಡಿದ್ದಾರೆ. ಪ್ರೀತಿ ರೂಮಿನವರೆಗೆ ಬರುವ ಕಾರಣ,ಸಂಬಂಧದ ವೇಳೆ ಸುರಕ್ಷಿತ ಕ್ರಮಕೈಗೊಳ್ಳದ ಕಾರಣ,ಹದಿಹರೆಯದಲ್ಲಿ ಮಕ್ಕಳಿಗೆ ತಾಯಿಯಾಗ್ತಿದ್ದಾರೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಹದಿಹರೆಯದ ಗರ್ಭಧಾರಣೆ ಬಗ್ಗೆ ಆಘಾತಕಾರಿ ವರದಿ ನೀಡಿದೆ.
ಅತ್ಯಾಚಾರ, ಬಾಲ್ಯ ವಿವಾಹ ಮತ್ತು ಅವೈಜ್ಞಾನಿಕ ಶಾರೀರಿಕ ಸಂಬಂಧಗಳಿಂದಾಗಿ, ದೇಶದಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅಚ್ಚರಿಯೆಂದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹ ಅತಿ ಹೆಚ್ಚು ಪ್ರಕರಣ ವರದಿಯಾಗಿದೆ. ಸಮೀಕ್ಷೆಯ ಪ್ರಕಾರ, ಕಳೆದ ವರ್ಷ ದೆಹಲಿಯಲ್ಲಿ ಶೇಕಡಾ 1.2 ರಷ್ಟು ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳು ವರದಿಯಾಗಿದ್ದು, ಅದು ಶೇಕಡಾ 3.3ರಷ್ಟು ಏರಿದೆ.