Publish Date: Mon, 28 Jun 2021 (14:09 IST)
Updated Date: Tue, 29 Jun 2021 (10:54 IST)
ರಾಜ್ಯಾದ್ಯಂತ ಭಾನುವಾರವೂ ರಜೆ ಕೊಡದ ಮಳೆರಾಯ ಎಲ್ಲೆಡೆ ವ್ಯಾಪಕ ಮಳೆ ಸುರಿಸಿದ್ದಾನೆ. ನಗರದಲ್ಲೂ ಬೆಳಗಿನಿಂದ ಮೋಡ ಕವಿದ ವತಾವರಣವಿದ್ದು ಯಾವುದೇ ಸಂಜೆಯ ನಂತರ ಮಳೆಯಾಗುವ ಸಾಧ್ಯತೆ ಕಂಡು ಬರುತ್ತಿದೆ.
ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ಹವಾಮಾನ ಸ್ಥಿಗತಿಗಳ ಬಗ್ಗೆ ಮಾಹಿತಿ ನೀಡಿದ್ದು ಮುಖ್ಯವಾಗಿ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ 14 ಸೆಂ.ಮೀ, ಮುದುಗಲ್ 7, ಕಾರ್ಕಳ ಮತ್ತು ದಾವಣಗೆರೆಯಲ್ಲಿ 6 ಸೆಂ.ಮೀ ಇಂದು ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಜೂನ್ 27ರಿಂದ ಜುಲೈ 1ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಜೂನ್ 27 ಮತ್ತು 28 ರಂದು ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಜೂನ್ 29ರಿಂದ ಜುಲೈ 1 ರವರೆಗೆ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಹೈದರಾಬಾದ್ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮುಂದಿನ 24 ಗಂಟೆಗಳ ವರೆಗೆ ಎಲ್ಲೋ ಅಲರ್ಟ್ ಕೊಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಜುಲೈ 1ರವರೆಗೆ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಸಿ.ಎಸ್ ಪಾಟೀಲ್ ಹೇಳಿದ್ದಾರೆ.