Publish Date: Fri, 12 Apr 2019 (09:43 IST)
Updated Date: Fri, 12 Apr 2019 (09:46 IST)
ಬೆಂಗಳೂರು: ಪದೇ ಪದೇ ತಾನು ರಾಜಕೀಯಕ್ಕೆ ಬರುವುದಿಲ್ಲ ಎಂದರೂ ಶಿವರಾಜ್ ಕುಮಾರ್ ಹೆಸರು ಯಾವುದಾದರೂ ಒಂದು ಕಾರಣಕ್ಕೆ ರಾಜಕಾರಣದಲ್ಲಿ ಕೇಳಿಬರುತ್ತದೆ.
ಇದೀಗ ಶಿವರಾಜ್ ಕುಮಾರ್ ನೀಡಿದ ಹೇಳಿಕೆಯೊಂದಕ್ಕೆ ಪತ್ನಿ ಗೀತಾ ಸಹೋದರನೂ ಆಗಿರುವ ಕುಮಾರ್ ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ಶಿವರಾಜ್ ಕುಮಾರ್ ‘ಕವಚ’ ತೆಗೆದಿಟ್ಟು ರಾಜಕೀಯಕ್ಕೆ ಬರಲಿ ಎಂದು ವ್ಯಂಗ್ಯ ಮಾಡಿದ್ದಾರೆ.
ಜೆಡಿಎಸ್ ನಿಂದ ಗೀತಾ ಶಿವರಾಜ್ ಕುಮಾರ್ ಸಹೋದರ ಮಧು ಬಂಗಾರಪ್ಪ ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮಧು ಬಂಗಾರಪ್ಪ ಪರ ಗೀತಾ ಪ್ರಚಾರಕ್ಕೆ ಹೋಗಿದ್ದರು. ಆದರೆ ಶಿವರಾಜ್ ಕುಮಾರ್ ನಾನು ಯಾರ ಪರವಾಗಿಯೂ ಪ್ರಚಾರ ಮಾಡಲ್ಲ ಎಂದಿದ್ದರು.
ಹಾಗಿದ್ದರೂ ಕವಚ ಚಿತ್ರದ ಪ್ರಚಾರಕ್ಕೆ ಬಂದ ಶಿವರಾಜ್ ಕುಮಾರ್ ರನ್ನು ನೀವು ಮಧು ಪರ ಪ್ರಚಾರ ಮಾಡುತ್ತೀರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಶಿವಣ್ಣ ‘ನಾನು ಯಾರ ಪರವಾಗಿಯೂ ಪ್ರಚಾರ ಮಾಡಲ್ಲ. ಮಧು ಒಳ್ಳೆಯ ಮನುಷ್ಯ. ಜನತೆಗೆ ಅವನು ಬೇಕಿಂದಿದ್ದರೆ ಅವರೇ ಓಟು ಹಾಕ್ತಾರೆ’ ಎಂದಿದ್ದರು. ಶಿವಣ್ಣ ಮಧು ಬಂಗಾರಪ್ಪ ಪರವಾಗಿ ಹೀಗೆ ಒಳ್ಳೆಯ ಮಾತನಾಡಿದ್ದು, ಬಿಜೆಪಿ ಶಾಸಕರಾಗಿರುವ ಸಹೋದರ ಕುಮಾರ್ ಬಂಗಾರಪ್ಪ ಪಿತ್ತ ನೆತ್ತಿಗೇರಿಸಿದೆ.
ಹೀಗಾಗಿಯೇ ಶಿವರಾಜ್ ಕುಮಾರ್ ಹರಿಹಾಯ್ದಿರುವ ಕುಮಾರ್ ಬಂಗಾರಪ್ಪ ಶಿವರಾಜ್ ಕುಮಾರ್ ಗೆ ರಾಜಕೀಯಕ್ಕೆ ಬರಬೇಕೆಂದಿದ್ದರೆ ಕವಚ ತೆಗೆದಿಟ್ಟು ನೇರವಾಗಿ ಬರಲಿ ಎಂದು ಕೆಂಡ ಕಾರಿದ್ದಾರೆ. ಕುಮಾರ್ ಹೇಳಿಕೆಗೆ ಶಿವರಾಜ್ ಕುಮಾರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ