Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಢಾಕಾ: ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಅಲ್ಲಿನ ಅಲ್ಪ ಸಂಖ್ಯಾತರಾದ ಹಿಂದೂಗಳ ಮೇಲೆ ಸಾಕಷ್ಟು ದಾಳಿ, ಹತ್ಯೆ ನಡೆದಿದೆ. ಆದರೆ ಅಲ್ಲಿ ಇಂತಹ ಹೋರಾಟದಲ್ಲಿ ಹಿಂದೂಗಳ ಹತ್ಯೆ ಮಾಡಿದರೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುತ್ತಿಲ್ಲ.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿ ಸಂಘಟನೆ ಹೋರಾಟ ನಡೆಸಿತ್ತು. ಆದರೆ ಮೇಲ್ನೋಟಕ್ಕೆ ಇದು ಮೀಸಲಾತಿ ಹೋರಾಟವಾದರೂ ಇದರಲ್ಲಿ ಬಲಿಯಾಗಿದ್ದು ಅಲ್ಪಸಂಖ್ಯಾತ ಹಿಂದೂಗಳು. ಇದರ ಬಗ್ಗೆ ಭಾರತದ ಪ್ರಧಾನಿ ಮೋದಿ ಕೂಡಾ ಖಂಡನೆ ವ್ಯಕ್ತಪಡಿಸಿದ್ದರು.
ಇದೀಗ ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನುಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಜಾರಿಗೆ ಬಂದಿದ್ದು, ಅಲ್ಪ ಸಂಖ್ಯಾತ ಹಿಂದೂಗಳ ಮೇಲೆ ನಡೆದ ದಾಳಿಗೆ ಕ್ಷಮೆ ಕೇಳಿದೆ. ಜೊತೆಗೆ ಹಿಂದೂಗಳ ಮೇಲೆ ದಾಳಿ ನಡೆಸದಂತೆ ಮನವಿ ಮಾಡಿದೆ. ಆದರೆ ಇದೆಲ್ಲವೂ ಕೇವಲ ಮನವಿ, ಕ್ಷಮೆಗಳಿಗೆ ಮಾತ್ರ ಸೀಮಿತ ಎಂದು ಈ ಹಿಂದಿನ ಘಟನಾವಳಿಗಳೇ ಹೇಳುತ್ತಿವೆ.
ಈ ಬಾರಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ಪ್ರತಿಪಕ್ಷ ಜಮಾತ್ ಇ ಇಸ್ಲಾಮ್ ಕೈವಾಡವಿದೆ ಎನ್ನಲಾಗಿದೆ. ಇದೇ ಸಂಘಟನೆಯೇ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಕುಮ್ಮಕ್ಕು ನೀಡುತ್ತಿರುವುದು. ಇದುವರೆಗೂ ನಡೆದಿರುವ ಇಂತಹ ದಾಳಿಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದೇ ಇಲ್ಲ. ಹೀಗಾಗಿಯೇ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇದ್ದು, ಮುಂದೊಂದು ದಿನ ಇಲ್ಲಿ ಶೇ.100 ರಷ್ಟು ಹಿಂದೂಗಳೇ ಇಲ್ಲ ಎಂಬ ಪರಿಸ್ಥಿತಿ ಬರಬಹುದು ಎನ್ನಲಾಗಿದೆ.