Publish Date: Wed, 08 Jul 2020 (10:07 IST)
Updated Date: Wed, 08 Jul 2020 (10:08 IST)
ಕೋಲ್ಕೊತ್ತಾ: ಬಂಗಾಳದ ಹುಲಿ ಎಂದೇ ಕರೆಯಿಸಿಕೊಳ್ಳುತ್ತಿದ್ದ ಟೀಂ ಇಂಡಿಯಾ ಕ್ರಿಕೆಟ್ ನ ಎವರ್ ಗ್ರೀನ್ ಕ್ಯಾಪ್ಟನ್ ಸೌರವ್ ಗಂಗೂಲಿಗೆ ಇಂದು 48 ವರ್ಷ ಪೂರ್ತಿಯಾಗಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಗಂಗೂಲಿಗೆ ನಾನಾ ಕಡೆಯಿಂದ ಶುಭಾಷಯ ಹರಿದುಬರುತ್ತಿದೆ.
ನಾಯಕನಾಗಿ ಗಂಗೂಲಿ ಭಾರತ ತಂಡಕ್ಕೆ ಅಮೂಲ್ಯ ಆಟಗಾರರನ್ನು ಕೊಡುಗೆಯಾಗಿ ನೀಡಿದ್ದರು. ಅವರ ನಾಯಕತ್ವದಲ್ಲಿ ಭಾರತ ತಂಡದಲ್ಲಿ ಯುವ, ಪ್ರತಿಭಾವಂತ ಆಟಗಾರರಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿತ್ತು.
ಇದೇ ಕಾರಣಕ್ಕೆ ಭಾರತಕ್ಕೆ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಯುವರಾಜ್ ಸಿಂಗ್, ಆಶಿಷ್ ನೆಹ್ರಾ, ಇರ್ಫಾನ್ ಪಠಾಣ್ ಎಂಬ ಘಟಾನುಘಟಿ ಪ್ರತಿಭಾವಂತ ಆಟಗಾರರು ಸಿಕ್ಕಿದ್ದು. ಅನುಭವಿಗಳನ್ನು ಕಡೆಗಣಿಸಿಯಾದರೂ ಸರಿಯೇ ತಮ್ಮದೇ ನೇರ ವ್ಯಕ್ತಿತ್ವ ಹೊಂದಿದ್ದ ಗಂಗೂಲಿಗೆ ಪಾಲಿಗೆ ಇವರೆಲ್ಲಾ ಮಾನಸ ಪುತ್ರರು ಎಂದರೂ ತಪ್ಪಲ್ಲ. ಈಗಲೂ ತಮ್ಮ ಮೆಚ್ಚಿನ ನಾಯಕ ಯಾರು ಎಂದು ಕೇಳಿದರೆ ಈ ಆಟಗಾರರೆಲ್ಲಾ ಗಂಗೂಲಿಯ ಹೆಸರೇ ಹೇಳುತ್ತಾರೆ.
ಯಾಕೆಂದರೆ ಗಂಗೂಲಿ ಈ ಆಟಗಾರರ ಮೂಲಕ ಭಾರತ ತಂಡದ ಭವಿಷ್ಯವನ್ನೇ ಬದಲಾಯಿಸಿದರು. ವೈಫಲ್ಯ, ಮ್ಯಾಚ್ ಫಿಕ್ಸಿಂಗ್ ನ ಸುಳಿಯಲ್ಲಿದ್ದ ಭಾರತೀಯ ಕ್ರಿಕೆಟ್ ಗೆ ತಮ್ಮ ಆಕ್ರಮಣಕಾರಿ ಮನೋಭಾವದ ಮೂಲಕ ಹೊಸ ದಿಕ್ಕು ತೋರಿದವರು. ಇಂತಿಪ್ಪ ದಾದನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.