Publish Date: Sun, 09 Jun 2019 (09:01 IST)
Updated Date: Sun, 09 Jun 2019 (09:03 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಎರಡನೇ ಪಂದ್ಯವನ್ನು ಇಂದು ಟೀಂ ಇಂಡಿಯಾ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದ ಉತ್ಸಾಹದಲ್ಲಿದೆ. ಟೀಂ ಇಂಡಿಯಾ ಕೂಡಾ ಇದಕ್ಕೂ ಮೊದಲು ದ.ಆಫ್ರಿಕಾ ವಿರುದ್ಧದ ಮೊದಲ ಪಂದ್ಯವನ್ನು ಗೆದ್ದ ಉತ್ಸಾಹದಲ್ಲಿದೆ. ಅದರ ನಡುವೆ ಧೋನಿ ಸೇನೆಯ ಚಿಹ್ನೆಯನ್ನು ಗ್ಲೌಸ್ ಮೇಲೆ ಬಳಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆ ವಿವಾದಗಳನ್ನು ಮರೆತು ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವುದರ ಕಡೆಗೆ ಟೀಂ ಇಂಡಿಯಾ ಗಮನ ಹರಿಸಬೇಕಿದೆ.
ತಂಡವಾಗಿ ನೋಡುವುದಾದರೆ ಟೀಂ ಇಂಡಿಯಾಕ್ಕಿರುವ ದೊಡ್ಡ ಸವಾಲು ಮೊದಲ 20 ಓವರ್ ಗಳಲ್ಲಿ ವೇಗಿಗಳನ್ನು ಮೆಟ್ಟಿ ನಿಲ್ಲುವುದು. ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಿಟ್ಟರೆ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡಿದರು ಎಂಬುದು ಗಂಭೀರವಾಗಿ ಚಿಂತಿಸಬೇಕಾದ ವಿಚಾರ.
ಬೌಲಿಂಗ್ ವಿಭಾಗದಲ್ಲೂ ವೇಗಿಗಳ ಪೈಕಿ ಬುಮ್ರಾ ಬಿಟ್ಟರೆ ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿ ಹೆಚ್ಚಿನ ಪ್ರಭಾವ ಬೀರಿಲ್ಲ. ಹೀಗಾಗಿ ಇವರಿಬ್ಬರೂ ಪ್ರದರ್ಶನ ಸುಧಾರಿಸಬೇಕಿದೆ. ಆಸ್ಟ್ರೇಲಿಯಾ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಆಫ್ರಿಕಾದಷ್ಟು ದರ್ಬಲವಲ್ಲ. ಹೀಗಾಗಿ ಈ ಪಂದ್ಯ ಗೆಲ್ಲಬೇಕಾದರೆ ಟೀಂ ಇಂಡಿಯಾ ಸರ್ವಾಂಗೀಣ ಪ್ರದರ್ಶನ ತೋರಬೇಕು.