Publish Date: Sun, 11 Aug 2019 (08:47 IST)
Updated Date: Sun, 11 Aug 2019 (08:49 IST)
ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಮಳೆ ಕೃಪೆ ತೋರಿದರೆ ಮಾತ್ರ ಪಂದ್ಯ ಎಂಬ ಪರಿಸ್ಥಿತಿ ಎದುರಾಗಿದೆ.
ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಒಟ್ಟು ಮೂರು ಪಂದ್ಯಗಳ ಸರಣಿಯನ್ನು ಗೆಲ್ಲಬೇಕಾದರೆ ಯಾವುದೇ ತಂಡವೂ ಇನ್ನೆರಡೂ ಪಂದ್ಯಗಳನ್ನೂ ಗೆದ್ದುಕೊಳ್ಳಬೇಕು.
ಭಾರತ ವಿಂಡೀಸ್ ಗೆ ಕಾಲಿಟ್ಟಾಗಿನಿಂದ ಮಳೆಯದ್ದೇ ಆಟವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಾದರೂ ಮಳೆ ಕೃಪೆ ತೊರಿ ಆಟ ಸಂಪೂರ್ಣವಾದರೆ ಸಾಕು ಎಂದು ಪ್ರಾರ್ಥಿಸುವಂತಾಗಿದೆ.
ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖವಾಗಿ ನಾಲ್ಕನೇ ಕ್ರಮಾಂಕಕ್ಕೆ ಯಾರನ್ನು ಆಡಿಸುತ್ತಾರೆ ಎಂಬುದೇ ಕುತೂಹಲದ ವಿಚಾರವಾಗಿದೆ. ಒಂದು ವೇಳೆ ರಿಷಬ್ ಪಂತ್ ರನ್ನು ಆಡಿಸಿದರೆ, ಕೆಎಲ್ ರಾಹುಲ್ ಇನ್ನೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯಬೇಕಾಗುತ್ತದೆ. ಇದರ ಹೊರತಾಗಿ ಮೊದಲ ಪಂದ್ಯದಲ್ಲಿ ನವ್ ದೀಪ್ ಶೈನಿಗೆ ಅವಕಾಶ ನೀಡಿರಲಿಲ್ಲ. ಟಿ20 ಸರಣಿಯಲ್ಲಿ ಮಿಂಚಿದ್ದ ಶೈನಿಯನ್ನು ಈ ಪಂದ್ಯದಲ್ಲಿ ಆಡಿಸಲೂಬಹುದು. ಒಟ್ಟಾರೆ ತಂಡದ ಕಾಂಬಿನೇಷನ್ ಆಯ್ಕೆ ನಾಯಕ ಕೊಹ್ಲಿಗೆ ದೊಡ್ಡ ತಲೆನೋವಾಗಲಿದೆ.
ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸೋನಿ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.