Publish Date: Tue, 09 Apr 2024 (08:29 IST)
Updated Date: Tue, 09 Apr 2024 (08:35 IST)
ಬೆಂಗಳೂರು: ಇಂದು ಯುಗಾದಿ ಹಬ್ಬದ ಸಂಭ್ರಮ. ಮನೆ ಮಂದಿಯೆಲ್ಲ ಬೇವು-ಬೆಲ್ಲ ತಿಂದು ನವ ವರ್ಷವನ್ನು ಬರಮಾಡಿಕೊಳ್ಳುವ ದಿನ. ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದು ಹೊಸ ವರ್ಷದಾರಂಭ.
ಯುಗಾದಿ ಹಬ್ಬಕ್ಕೆ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟು ಪೂಜೆ ಮಾಡಿ ಬೇವು-ಬೆಲ್ಲ ತಿನ್ನುತ್ತೇವೆ. ಜೀವನದಲ್ಲಿ ಕಹಿ-ಸಿಹಿ ಎರಡೂ ಮಿಶ್ರಿತವಾಗಿರುತ್ತದೆ. ಇವೆರಡನ್ನೂ ಸಮಾನವಾಗಿ ಸ್ವೀಕರಿಸೋಣ ಎಂದು ಮನೆ ಮಂದಿಯೆಲ್ಲಾ ಹೇಳಿಕೊಂಡು ಹಬ್ಬದೂಟ ಮಾಡುತ್ತೇವೆ.
ಯುಗಾದಿ ಹಬ್ಬದ ದಿನ ಚಂದ್ರದರ್ಶನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿದೆ. ಯುಗಾದಿ ಎಂದರೆ ಹೊಸ ವರ್ಷವೆಂದು ಅರ್ಥ. ಹೊಸ ವರ್ಷದ ಮೊದಲ ದಿನವೇ ಚಂದ್ರ ದರ್ಶನ ಮಾಡಿದರೆ ಆ ವರ್ಷವಿಡೀ ಸುಖ-ಸಮೃದ್ಧಿಯಿರುವುದು ಎಂಬ ನಂಬಿಕೆಯಿದೆ.
ನಮ್ಮ ಕರ್ನಾಟಕದಲ್ಲಿ ಕೆಲವು ಕಡೆ ಚಂದ್ರ ದರ್ಶನ ಮಾಡುವ ಸಂಪ್ರದಾಯವಿದೆ. ಕೆಲವು ಕಡೆ ಇದು ಇಲ್ಲ. ಹಾಗಿದ್ದರೂ ಯುಗಾದಿ ದಿನ ಪೂಜೆ ಮಾಡಿ ಹೊಸ ವರ್ಷವನ್ನು ಬರಮಾಡಿಕೊಂಡರೆ ವರ್ಷವಿಡೀ ಒಳಿತಾಗುವುದು.