Publish Date: Mon, 15 Oct 2018 (15:35 IST)
Updated Date: Mon, 15 Oct 2018 (15:37 IST)
ಬೆಂಗಳೂರು : ಇಲಿಗಳ ಎಂಜಲು ತಿಂದರೆ ಕಾಯಿಲೆ ಬೀಳುತ್ತಾರೆ ಎಂದು ಹೇಳುತ್ತಾರೆ. ಆದರೆ ರಾಜಸ್ತಾನದ ಬಿಕನೇರ್ ನಿಂದ 30 ಕಿಮೀ ದೂರದಲ್ಲಿರೋ ಇಲಿಗಳ ದೇವಸ್ಥಾನವೆಂದೇ ಕರೆಯುವ ಕರ್ಣಿ ಮಾತಾ ದೇವಾಲಯದಲ್ಲಿ ಇಲಿಗಳು ತಿಂದ ಎಂಜಲೇ ಪ್ರಸಾದವಂತೆ.
ಹೌದು. ನೀರು ಕುಡಿಯಲು ಹೋಗಿದ್ದ ಕರ್ಣಿ ಮಾತಾಳ ಪುತ್ರ ಸರೋವರದಲ್ಲಿ ಮುಳುಗಿಬಿಟ್ಟಿದ್ದನಂತೆ. ಆತನನ್ನು ಬದುಕಿಸುವಂತೆ ಕರ್ಣಿ ಮಾತಾ ಯಮರಾಜನ ಬಳಿ ಪ್ರಾರ್ಥಿಸಿದ್ದಳು. ಇದಕ್ಕೆ ಸಮ್ಮತಿಸಿದ ಯಮರಾಜ, ಕರ್ಣಿ ಮಾತೆಯ ಮಗನಿಗೆ ಇಲಿಯ ರೂಪದಲ್ಲಿ ಪುನರ್ಜನ್ಮ ನೀಡಿದ್ದ ಎಂಬ ಪುರಾಣವಿದೆ. ಹಾಗಾಗಿ ಈ ಇಲಿಗಳಿಗೆಲ್ಲ ಕರ್ಣಿ ಮಾತಾ ತಾಯಿ ಎಂಬ ನಂಬಿಕೆ ಇದೆ.
ಆದ್ದರಿಂದ ದೇವಿಯ ಪುತ್ರರಾದ ಇಲಿಗಳ ಎಂಜಲು ತಿನ್ನಲು ಭಕ್ರರ ದಂಡೆ ಇಲ್ಲಿಗೆ ಬರುತ್ತದೆ. ಆದರೆ ವಿಚಿತ್ರವೆನೆಂದರೆ ಇಲಿಗಳು ಅರ್ಧ ತಿಂದುಬಿಟ್ಟ ಪ್ರಸಾದವನ್ನು ತಿಂದ ಭಕ್ತರಿಗೆ ಇದುವರೆಗೂ ಯಾವುದೇ ರೀತಿಯ ಅಪಾಯವಾಗಿಲ್ಲ, ಅನಾರೋಗ್ಯಕ್ಕೆ ತುತ್ತಾಗಿಲ್ಲವಂತೆ.
ಈ ದೇವಾಲಯದ ಆವರಣದಲ್ಲಿ 30,000ಕ್ಕೂ ಅಧಿಕ ಇಲಿಗಳಿವೆಯಂತೆ. ಆದ್ರೆ ಬಿಳಿ ಇಲಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿವೆ. ಯಾರಿಗೆ ಬಿಳಿ ಇಲಿಯ ದರ್ಶನವಾಗುತ್ತದೆಯೋ ಅವರಿಗೆ ಜೀವನಪೂರ್ತಿ ಕರ್ಣಿ ಮಾತಾಳ ಆಶೀರ್ವಾದ ಲಭಿಸುತ್ತದೆ ಎಂಬ ನಂಬಿಕೆಯಿದೆ. ಆಕಸ್ಮಿಕವಾಗಿ ನಿಮ್ಮ ಕಾಲಡಿಯಲ್ಲಿ ಸಿಕ್ಕು ಇಲಿ ಮೃತಪಟ್ಟರೆ ಆ ಪಾಪಕ್ಕೆ ನೀವು ಬೆಳ್ಳಿ ಅಥವಾ ಚಿನ್ನದ ಇಲಿಯನ್ನು ಕಾಣಿಕೆಯಾಗಿ ನೀಡಿ ಹರಕೆ ತೀರಿಸಿಕೊಂಡು ಪ್ರಾಯಶ್ಚಿತ ಮಾಡಿಕೊಳ್ಳಬೇಕಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.