Publish Date: Thu, 26 Oct 2017 (15:10 IST)
Updated Date: Thu, 26 Oct 2017 (15:22 IST)
ಮೈಸೂರು: ಚಾಮುಂಡಿಬೆಟ್ಟದಿಂದ ಮೃಗಾಲಯಕ್ಕೆ ಬಂದ ಚಿರತೆಯನ್ನ ಯಶಸ್ವಿಯಾಗಿ ಸೆರೆ ಹಿಡಿಯುವಲ್ಲಿ ಮೃಗಾಲಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಚಾಮುಂಡಿಬೆಟ್ಟದಿಂದ ನಿನ್ನೆ ರಾತ್ರಿ ಒಂದೂವರೆ ವರ್ಷದ ಗಂಡು ಚಿರತೆ ದಾರಿ ತಪ್ಪಿ ಮೃಗಾಲಯದೊಳಗೆ ಬಂದಿದೆ. ಆದರೆ ಅಪರಿಚಿತ ಪ್ರಾಣಿ ಮೃಗಾಲಯದ ಒಳಗೆ ಬಂದಿದ್ದನ್ನ ಕಂಡ ಮೃಗಾಲಯದ ಕೋತಿಗಳು ಜೋರಾಗಿ ಶಬ್ಧ ಮಾಡಲು ಆರಂಭಿಸಿವೆ. ಇದರಿಂದ ಗಾಬರಿಯಾದ ಚಿರತೆ ಮೃಗಾಲಯದಲ್ಲಿದ್ದ ದೊಡ್ಡಮರವೇರಿ ಕುಳಿತಿದೆ.
ಬೆಳಗ್ಗೆ 8.30ಕ್ಕೆ ಮೃಗಾಲಯದ ಸಿಬ್ಬಂದಿ ಆಗಮಿಸಿದಾಗ ಕೋತಿಗಳ ಚೀರಾಟ ಕಂಡು ಮರ ನೋಡಿದಾಗ ಚಿರತೆ ಇರುವುದು ಕಂಡು ಬಂದಿದೆ. ಕೂಡಲೇ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿದಾಗ ತಕ್ಷಣ ಆಗಮಿಸಿದ ಅಧಿಕಾರಿಗಳು ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆ ಹೇಗೆ?
ಕಾರ್ಯಾಚರಣೆ ಕೈಗೊಂಡ ಮೃಗಾಲಯ ಪಶುವೈದ್ಯರು ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ್ದು, ಚುಚ್ಚು ಮದ್ದಿನಿಂದ ಮಂಪರಿಗೆ ಬಂದ ಚಿರತೆಯನ್ನು ಮರದ ಮೇಲಿಂದ ಬಲೆ ಮೂಲಕ ಕೆಳಗೆ ಸುರಕ್ಷಿತವಾಗಿ ಮತ್ತೊಂದು ಬಲೆಗೆ ತಳ್ಳಿದ್ದಾರೆ. ಚಿರತೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾದ ನಂತರ ಸಿಬ್ಬಂದಿ ಚಿರತೆಯನ್ನು ಮೃಗಾಲಯದಲ್ಲಿರುವ ಆಸ್ಪತ್ರೆಗೆ ಬೋನ್ ನಲ್ಲಿ ತಂದಿದ್ದಾರೆ. ಅಲ್ಲಿ ಮತ್ತೊಂದು ಇಂಜೆಕ್ಷನ್ ನೀಡಿ ಪ್ರಜ್ಞೆ ಬರುವಂತೆ ಮಾಡಿದ್ದಾರೆ ಎಂದು ಮೃಗಾಲಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿಶಂಕರ್ ವಿವರಿಸಿದ್ದಾರೆ.